ಬೆಂಗಳೂರು prajakiran.com : ಧಾರವಾಡ ಜಿಲ್ಲಾ ಪಂಚಾಯತ್ ಹೆಬ್ಬಳ್ಳಿ ಕ್ಷೇತ್ರದ ಬಿಜೆಪಿ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣ ಕುರಿತಂತೆ ಸಿಬಿಐ ಅಧಿಕಾರಿಗಳ ತಂಡ ಮಾಜಿ ಸಚಿವರ ಹಲವು ಆಪ್ತರನ್ನು ವಿಚಾರಣೆಗೆ ಒಳಪಡಿಸಿದೆ.
ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿರುವ ಸಿಬಿಐ ಕಚೇರಿಗೆ ಕರೆಸಿಕೊಂಡು ಹಲವು ಗಂಟೆಗಳ ಕಾಲ ವಿಚಾರಣೆಗೊಳಪಡಿಸಿ ಮಹತ್ವದ ಸಾಕ್ಷ್ಯ ಸಂಗ್ರಹಿಸಿದೆ ಎಂದು ತಿಳಿದುಬಂದಿದೆ.
ವಿನಯಕುಲಕರ್ಣಿಯವರು ಸಚಿವರಾಗಿದ್ದ ವೇಳೆ ಆಪ್ತ ಕಾರ್ಯದರ್ಶಿಯಾಗಿದ್ದ ಕೆ ಎ ಎಸ್ ಅಧಿಕಾರಿ ಸೋಮು ನ್ಯಾಮಗೌಡರ ಅವರನ್ನು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು.
ಅದರಂತೆ ವಿಚಾರಣೆಗೆ ಹಾಜರಾದ ಮಾಜಿ ಆಪ್ತ ಕಾರ್ಯದರ್ಶಿ ಹಾಗೂ ಹಿರಿಯ ಕೆಎಎಸ್ ಅಧಿಕಾರಿ ಸೋಮು ನ್ಯಾಮಗೌಡರ ಅವರನ್ನು ಸಿಬಿಐಅಧಿಕಾರಿಗಳ ತಂಡ ಯೋಗೀಶಗೌಡ ಕೊಲೆ ಪ್ರಕರಣ ರಾಜಕೀಯ ಪ್ರೇರಿತವೇ, ಹತ್ಯೆಯ ಹಿಂದೆ ಪ್ರಭಾವಿಗಳ ಕೈವಾಡವಿದೆಯೇ ಎಂಬುದು ಸೇರಿದಂತೆ ಹತ್ತು ಹಲವು ಪ್ರಶ್ನೆಗಳಿಗೆ ಹಲವು ಮಾಹಿತಿಗಳನ್ನು ಕಲೆ ಹಾಕಿದೆ ಎನ್ನಲಾಗಿದೆ.
ಇದಲ್ಲದೆ, ಮಾಜಿ ಸಚಿವರಾದ ಮಾವನವರಾದ ಚಂದ್ರಶೇಖರ ಇಂಡಿ (ಚಂದು ಮಾಮಾ), ನಟರಾಜ್ ಹಾಗೂ ಹಲವರನ್ನು ವಿಚಾರಣೆಗೆ ಒಳಪಡಿಸಿದೆ ಎಂದು ತಿಳಿದುಬಂದಿದೆ. ಇದರಿಂದಾಗಿ ಯೋಗೀಶಗೌಡ ಗೌಡರ ಕೊಲೆ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಂತಾಗಿದೆ.