- ವಿಶೇಷ ವರದಿ : ಪ್ರಶಾಂತ ಹೂಗಾರ್ ಹೊಲದಲ್ಲೆ ಕೊಳೆಯುತ್ತಿರುವ ಈರುಳ್ಳಿ
ಸವದತ್ತಿ prajakiran.com : ತಾಲೂಕಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಈರುಳ್ಳಿ ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹೌದು ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಸತತ ಮಳೆ ಪರಿಣಾಮ ಈರುಳ್ಳಿ ಬೆಳೆದ ರೈತರು ಕಣ್ಣೀರು ಸುರಿಸುವಂತಹ ಪರಿಸ್ಥಿತಿ ಇದೀಗ ನಿರ್ಮಾಣವಾಗಿದೆ.
ಹಿಂದಿನ ವರ್ಷ ಅತಿಯಾದ ಮಳೆ ಮತ್ತು ಪ್ರವಾಹದಿಂದ ನಷ್ಟದಲ್ಲಿರುವ ರೈತರಿಗೆ ಮತ್ತೊಂದು ಸಂಕಷ್ಟ ಎದುರಾದಂತಾಗಿದೆ.
ಹಿಂದಿನ ವರ್ಷದಲ್ಲಿ ಸಾಲ ಸೂಲ ಮಾಡಿ ಬೆಳೆದ ಬೆಳೆ ಮಳೆರಾಯನ ಪಾಲಾಗಿತ್ತು.
ಈ ವರ್ಷ ಉತ್ತಮ ಬೆಳೆ ಬೆಳೆದು ಸಾಲದಿಂದ ಮುಕ್ತಿ ಹೊಂದಬೇಕು ಎಂದುಕೊಂಡಿದ್ದ ರೈತನ ಬದುಕು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಈರುಳ್ಳಿ ಬೆಳೆ ಹೊಲದಲ್ಲಿಯೇ ಕೊಳೆಯುತ್ತಿದೆ. ಇದು ಗಾಯದ ಮೇಲೆ ಬರೆ ಎಳೆದ ಸ್ಥಿತಿ ಈರುಳ್ಳಿ ಬೆಳೆದ ರೈತನಿಗಾಗಿದೆ.
ಹಂಚಿನಾಳ ಗ್ರಾಮದ ನಾಗಪ್ಪ ಹೂಗಾರ ಎನ್ನುವ ರೈತ 3 ಎಕರೆ ಭೂಮಿಯಲ್ಲಿ ಈರುಳ್ಳಿ ಬಿತ್ತನೆ ಮಾಡಿದ್ದು, ಬಿತ್ತನೆಯಿಂದ ಹಿಡಿದು ಎಣ್ಣೆ ಸಿಂಪಡಣೆ. ಗೊಬ್ಬರ ಮತ್ತು ಕಳೆ ತೆಗೆಯುವುದು, ಇನ್ನಿತರ ಕೆಲಸಗಳಿಗಾಗಿ ಲಕ್ಷಾಂತರ ರೂಪಾಯಿ ಸಾಲ ಸೂಲ ಮಾಡಿ ಖರ್ಚು ಮಾಡಿದ್ದ.
ಅಲ್ಲದೆ ಈ ಭಾರಿ ಈರುಳ್ಳಿಗೆ ಬೇಡಿಕೆ ಹೆಚ್ಚಿರುವುದರಿಂದ ಉತ್ತಮವಾದ ದರದಲ್ಲಿ ಮಾರಾಟ ಮಾಡಿ ಸಾಲದಿಂದ ಮುಕ್ತಿ ಹೊಂದಬೇಕು ಎಂದುಕೊಂಡಿದ್ದ ರೈತನ ನಿರೀಕ್ಷೆ ಇದೀಗ ಹುಸಿಯಾಗಿದೆ.
ಗ್ರಾಮದಲ್ಲಿ ಬೆಳೆಯಲಾದ ಈರುಳ್ಳಿ ಸಂಪೂರ್ಣ ಕೊಳೆತು ನಾಶವಾಗಿವೆ ಸತತವಾಗಿ ನಷ್ಟ ಅನುಭವಿಸುತ್ತಿರುವ ರೈತರ ಬದುಕು ಚಿಂತಾಜನಕವಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು, ಈರುಳ್ಳಿ ಬೆಳೆದ ರೈತರ ಸ್ಥಿತಿ ಚಿಂತಾಜನಕವಾಗಿದೆ. ನಾಗಪ್ಪ ಹೂಗಾರ. ಈರುಳ್ಳಿ ಬೆಳೆದ ರೈತ
ಸಾಲ ತಂದು ಹೊಲಕ್ಕೆ ಈರುಳ್ಳಿ ಹಾಕಿದ್ದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ರಾಸಾಯನಿಕ ಸಿಂಪಡಣೆ, ಗೊಬ್ಬರ, ಕಳೆ ತೆಗೆದು ಉತ್ತಮವಾಗಿ ಬೆಳೆಸಿದ್ದೆ. ಇನ್ನೇನೂ ಈರುಳ್ಳಿ ಕಟಾವು ಮಾಡಬೇಕು.
ಅನ್ನುವಷ್ಟರಲ್ಲಿ ಮಳೆಯಿಂದಾಗಿ ಸಂಪೂರ್ಣ ಕೊಳೆತು ಹೋಗಿದೆ ಎಂದು ಅಳಲು ತೊಡಿಕೊಂಡ್ರು.
ಈರುಳ್ಳಿ ಬೆಳೆಗಾರರತ್ತ ಸರ್ಕಾರ ಧಾವಿಸಬೇಕಿದೆ.
ಈರುಳ್ಳಿಯಿಂದ ತಾಲೂಕಿನಾದ್ಯಂತ ನಷ್ಟ ಅನುಭವಿಸಿದ ರೈತರಲ್ಲಿಗೆ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಧಾವಿಸಿ ಅವರಿಗೆ ಪರಿಹಾರ ನೀಡಿ ಧೈರ್ಯ ಹೇಳಿ ಈರುಳ್ಳಿ ಬೆಳೆಗಾರರ ಕಣ್ಣೀರು ಒರೆಸುವ ಕೆಲಸ ಮಾಡಬೇಕಿದೆ.