ಧಾರವಾಡ prajakiran.com : ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಹುಬ್ಬಳ್ಳಿ-ಧಾರವಾಡದ ಕೆಲವು ಪೊಲೀಸರಿಗೆ ಬಿಸಿ ತಾಕಿಸಿದ್ದಾರೆ.
ಧಾರವಾಡದ ಉಪನಗರ ಠಾಣೆಯಲ್ಲಿ ಕಳೆದ ಹಲವು ದಿನಗಳಿಂದ ಬೀಡು ಬಿಟ್ಟಿರುವ ಸಿಬಿಐ ಅಧಿಕಾರಿಗಳ ತಂಡ ಬೆಳಗ್ಗೆಯಿಂದ ಸಂಜೆಯವರೆಗೆ ಹಲವರನ್ನು ಕರೆಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಬುಧವಾರ ಈ ಪ್ರಕರಣದಲ್ಲಿ ಈ ಹಿಂದೆ ಕೊಲೆ ಪ್ರಕರಣದಲ್ಲಿ ರಾಜೀ ಸಂಧಾನಕ್ಕೆ ಯತ್ನಿಸಿದ್ದ ಆರೋಪಕೇಳಿ ಬಂದಿದ್ದ ಧಾರವಾಡದ ಡಿವೈಎಸ್ಪಿ ಹಾಗೂ ಪ್ರಸ್ತುತ ಬೀದರ ಜಿಲ್ಲೆಯ ಹುಮನಾಬಾದ್ ಡಿವೈಎಸ್ಪಿ ಆಗಿರುವ ಬಿ.ಪಿ. ಚಂದ್ರಶೇಖರ್ ಅವರ ವಿಚಾರಣೆ ನಡೆಸಿದರು.
ಅವರನ್ನು ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಿದ ಸಿಬಿಐ ಅಧಿಕಾರಿಗಳ ತಂಡ ಆ ರಾಜೀ ಸಂಧಾನದಲ್ಲಿ ಯಾರೆಲ್ಲ ಭಾಗಿಯಾಗಿದ್ದರು. ಏನೆಲ್ಲಾ ಮಾತುಕತೆ ನಡೆದಿತ್ತು. ಯಾರು, ಯಾರಾರ ಮೇಲೆ ಒತ್ತಡ ಹಾಕಿದ್ದರೂ, ಇದರ ಸೂತ್ರಧಾರಿ ಹಾಗೂ ಪಾತ್ರಧಾರಿಗಳ ಕುರಿತು ವಿಚಾರಣೆ ನಡೆಸಿದರು ಎನ್ನಲಾಗಿದೆ.
ಅದರಲ್ಲೂ ವಿಶೇಷವಾಗಿ ಅವರು ಈ ಹಿಂದೆ ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸಿದ ಪೊಲೀಸ್ ಅಧಿಕಾರಿಗಳ ವಿಚಾರಣೆ ನಡೆಸಿದರು ಎಂದು ತಿಳಿದುಬಂದಿದೆ.
ಕೆಲವು ಪೊಲೀಸರಿಗೆ ಸಖತ್ ಡ್ರಿಲಿಂಗ್ ಮಾಡಿದ್ದು, ಮಹತ್ತರ ಮಾಹಿತಿ ಸಂಗ್ರಹಿಸುವಲ್ಲಿ ನಿರತರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಪೊಲೀಸ ಕಾನ್ಸಟೇಬಲ್ ಗಳಾದ ಬಾಬು ಕಟಗಿ, ತೋಸಿಫ್ ದಾವಲ್, ನಾಗರಾಜ ಕೆಂಚಣ್ಣವರ, ರಮೇಶ ಮುದುಕನಗೌಡರ, ನಿವೃತ್ತ ಎ ಎಸ್ ಐ ಎಸ್. ಎಲ್ ಪಾಟೀಲಅವರಿಗೆ ಹಲವು ದಿನಗಳಿಂದ ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಇದೇ ವೇಳೆ ಮಾಜಿ ಸಚಿವರಾದ ಮಾವನವರ ಚಂದ್ರಶೇಖರ ಇಂಡಿ, (ಚಂದು ಮಾಮಾ) ಅವರನ್ನು ಕೂಡ ಸಿಬಿಐ ಅಧಿಕಾರಿಗಳು ಸತತ ಮೂರು ದಿನಗಳ ಕಾಲ ವಿಚಾರಣೆ ನಡೆಸಿದರು ಎಂದು ತಿಳಿದುಬಂದಿದೆ.
ಇವರ ಕುರಿತು ಈ ಹಿಂದೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಇವರನ್ನು ವಿಚಾರಣೆ ನಡೆಸಿದ ಪ್ರಕರಣದ ಸಂಪೂರ್ಣ ಮಾಹಿತಿ ದೊರೆಯಲಿದೆ ಎಂದು ಅಂದು ಗಂಭೀರ ಆರೋಪ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದೇ ವೇಳೆ ಮಾಜಿ ಸಚಿವರ ಆಪ್ತ ಕಾರ್ಯದರ್ಶಿ ಪ್ರಶಾಂತ ಕೇಕರೆ, ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಶ್ರೀ ಪಾಟೀಲ, ಮಲ್ಲಿಕಾರ್ಜುನ ಪೂಜಾರ, ಸಲೀಂ ಬ್ಯಾಹಟ್ಟಿ, ಫಯಾಜ್ ಬಸ್ತವಾಡ್, ಕಾಂಗ್ರೆಸ್ ಮುಖಂಡರಾದ ಬಾಪು ಗೌಡ ಪಾಟೀಲ, ಸೇರಿದಂತೆ ಅನೇಕರನ್ನು ವಿಚಾರಣೆ ನಡೆಸಿದರು ಎಂದು ತಿಳಿದುಬಂದಿದೆ.
ಈ ಹಿಂದೆ ಹುಬ್ಬಳ್ಳಿ-ಧಾರವಾಡದಅಂದಿನ ಪೊಲೀಸ್ ಆಯುಕ್ತ ಹಾಗೂ ಸದ್ಯ ನಿವೃತ್ತರಾಗಿರುವ ಪಾಂಡುರಂಗ ರಾಣೆ,ಅಂದಿನ ಉಪಪೊಲೀಸ್ ಆಯುಕ್ತರಾಗಿದ್ದ ಸದ್ಯ ಹಾವೇರಿ ಎಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಹಾಗೂ ಅಂದಿನ ಇನ್ನೊಬ್ಬ ಡಿಸಿಪಿ ಹಾಗೂ ಸದ್ಯ ರಾಮನಗರ ಪೊಲೀಸ್ ತರಬೇತಿ ಶಾಲೆಯ ಮುಖ್ಯಸ್ಥರಾಗಿರುವ ಜಿನೇಂದ್ರ ಖಣಗಾವಿಅವರ ವಿಚಾರಣೆ ನಡೆಸಿದ್ದರು.
ಅಲ್ಲದೆ, ರಾಜಿ ಸಂಧಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆರೋಪ ಕೇಳಿಬಂದಿದ್ದ ಬೆಳಗಾವಿಯ ಐಜಿಪಿಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹಾಗೂ ಪ್ರಸ್ತುತ ವಿಜಯಪುರದಲ್ಲಿ ಡಿವೈಎಸ್ಪಿ ಆಗಿರುವ ತುಳಜಪ್ಪ ಸುಲ್ಫೀ ವಿಚಾರಣೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.