ಬೆಂಗಳೂರು prajakiran.com : ನಿಮ್ಮ ಕುಟುಂಬಕ್ಕೆ ಕಂಟಕವಿದೆ.ಅದರ ಪರಿಹಾರಕ್ಕೆ ಪೂಜೆ ಮಾಡಿಸಬೇಕು ಎಂದು ಯುವತಿಯನ್ನು ನಂಬಿಸಿದ್ದ ಜ್ಯೋತಿಷಿಯೊಬ್ಬ, ಹಂತಹಂತವಾಗಿ 15 ಲಕ್ಷ ರೂ. ಪಡೆದು ವಂಚಿಸಿದ ಘಟನೆ ರಾಜ್ಯದ ರಾಜಧಾನಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರಿನ ಸುಬ್ಬನಪಾಳ್ಯ ನಿವಾಸಿ 28 ವರ್ಷದ ಯುವತಿ ವಂಚನೆಗೊಳಗಾದವರು ಎಂದು ತಿಳಿದುಬಂದಿದೆ. ಈಕೆ ಕೊಟ್ಟ ದೂರಿನ ಮೇರೆಗೆ ಅಪರಿಚಿತ ಜ್ಯೋತಿಷಿಯ ವಿರುದ್ಧ ಪೂರ್ವ ವಿಭಾಗದ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸಂತ್ರಸ್ತ ಯುವತಿ ಏಪ್ರಿಲ್ನಲ್ಲಿ ಭವಿಷ್ಯ ಕೇಳುವ ಸಲುವಾಗಿ ಗೂಗಲ್ನಲ್ಲಿ ಜೋತಿಷಿಯ ಪೊನ್ ನಂಬರ್ ಹುಡುಕಿದ್ದಳು.
ಅದರಲ್ಲಿ ಸಿಕ್ಕ ನಂಬರ್ಗೆ ಕರೆ ಮಾಡಿ ವಿಚಾರಿಸಿದ್ದಳು. ಜೋತಿಷ್ಯ ಹೇಳುವ ಸೋಗಿನಲ್ಲಿ ಯುವತಿಯ ಜತೆ ಮಾತನಾಡಿದ್ದ ಅಪರಿತ, ಆಕೆಯಿಂದ ಜನ್ಮ ದಿನಾಂಕ ಮತ್ತಿತರ ಮಾಹಿತಿ ಪಡೆದುಕೊಂಡಿದ್ದ.
‘ನಿಮಗೆ ಸಮಸ್ಯೆ ಇದೆ. ನಿಮ್ಮ ತಂದೆ-ತಾಯಿಗೆ ಹಾಗೂ ಮದುವೆಯಾಗಲಿರುವ ಹುಡಗನಿಗೆ ಗಂಡಾಂತರವಿದೆ.
ಇಡೀ ಕುಟುಂಬಕ್ಕೆ ಕಂಟಕವಿದೆ ಎಂದು ಬೆದರಿಸಿದ್ದಾನೆ. ಅಲ್ಲದೆ, ಪರಿಹಾರ ಪೂಜೆ ಮಾಡಿಸಬೇಕು’ ಎಂದಿದ್ದ.
ಆತನ ಮಾತನ್ನು ನಂಬಿದ ಯುವತಿ ಹಂತಹಂತವಾಗಿ 15 ಲಕ್ಷ ರೂ. ಬ್ಯಾಂಕ್ ಖಾತೆಗೆ ಸಂದಾಯ ಮಾಡಿದ್ದಾಳೆ.
ಹಣ ಪಡೆದಿದ್ದ ಆತ ಇತ್ತೀಚೆಗೆ ಸಂಪರ್ಕಕ್ಕೆ ಸಿಕ್ಕಿಲ್ಲ. ವಂಚನೆಯಾಗಿರುವ ವಿಚಾರ ಯುವತಿಯ ಪಾಲಕರಿಗೆ ಗೊತ್ತಾಗಿದೆ.
ಬಳಿಕೆ ಠಾಣೆಗೆ ಬಂದು ಯುವತಿಯಿಂದ ದೂರು ಕೊಡಿಸಿದ್ದಾರೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.