ಸಂಚಾರಿ ವಿಜಯ್ ಆರೋಗ್ಯ ಕುರಿತು ವೈದ್ಯರ ಸ್ಪಷ್ಟನೆ
ಬೆಂಗಳೂರು prajakiran.com : ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಸ್ಥಿತಿ ಗಂಭೀರವಾಗಿದ್ದು, ಅಪಘಾತವಾದ ಪರಿಣಾಮ ಮಿದುಳಿಗೆ ಊತ ಉಂಟಾಗಿದೆ.
ಇದು ಬೈನ್ ಫೇಲ್ಯೂರ್ಗೆ ಕಾರಣವಾಗಬಹುದು ಎಂದು ಡಾ.ಅರುಣ್ ನಾಯ್ಕ್ ಹೇಳಿದ್ದಾರೆ.
ಸಂಚಾರಿ ವಿಜಯ್ ಆಸ್ಪತ್ರೆಗೆ ದಾಖಲಾಗಿ 36 ಗಂಟೆಗಳು ಕಳೆದಿವೆ. ಅವಾಗಿಂದಲೂ ವಿಜಯ್ ಸ್ಥಿತಿ ಗಂಭೀರವಾಗಿಯೇ ಇದೆ.
ಅವರ ಮಿದುಳು ನಿಷ್ಕ್ರಿಯವಾಗುವ ಹಂತ ತಲುಪುತ್ತಿದೆ. ನಿನ್ನೆ ರಾತ್ರಿಯಿಂದ ಉಸಿರಾಟವು ನಿಲ್ಲಿಸಿದ್ದು, ವೆಂಟಿಲೇಟರ್ ಮೂಲಕ ಉಸಿರಾಡುತ್ತಿದ್ದಾರೆ.
ಸಂಜೆ ಮತ್ತೆ ತಪಾಸಣೆ ಮಾಡಲಾಗುತ್ತದೆ. ಆ ಬಳಿಕ ಮತ್ತೊಮ್ಮೆ ವಿವರ ನೀಡಲಾಗುತ್ತದೆ ಎಂದು ಹೇಳಿದರು.
ಈ ಹಂತದಲ್ಲಿ ಯಾವುದೇ ಭರವಸೆ ನೀಡಲಾಗುವುದಿಲ್ಲ ಎಂದರು.
ಇನ್ನೂ ಈ ಸಂದರ್ಭದಲ್ಲಿ ವಿಜಯ್ ಸಹೋದರ ಸಿದ್ದೇಶ್ ಮಾತನಾಡಿ, ವಿಜಯ್ ಕೋಮಾದಲ್ಲಿ ಇದ್ದಾರೆ.
ಅವರು ಬದುಕುಳಿಯುವ ಸಾಧ್ಯತೆ ಕಡಿಮೆಯಾಗಿವೆ. ಈ ಸಂದರ್ಭದಲ್ಲಿ ಈ ಮಾತುಗಳನ್ನು ಹೇಳಬಾರದು.
ಆದರೆ ಒಂದು ವೇಳೆ ಇಲ್ಲವಾದರೆ ಅವರ ಅಂಗಾಂಗಗಳನ್ನು ದಾನ ಮಾಡಲು ಕುಟುಂಬ ನಿರ್ಧರಿಸಿದೆ ಎಂದರು.
ಇನ್ನೂ ಚಿತ್ರರಂಗದ ಗೆಳೆಯನಾದ ಲೂಸಿಯಾ ಖ್ಯಾತಿಯ ನಿನಾಸಂ ಸತೀಶ್ ಮಾತನಾಡಿ, ತುಂಬಾ ಒಳ್ಳೆಯ ವ್ಯಕ್ತಿ ಸಂಚಾರಿ ವಿಜಯ್. ಅವನ ಈ ಸ್ಥಿತಿಯನ್ನು ನೋಡಲಾಗುತ್ತಿಲ್ಲ ಎಂದರು.
ಇನ್ನೂ ವಿಜಯ್ ಅವರ ಸಂಪೂರ್ಣ ಚಿಕಿತ್ಸೆಯ ವೆಚ್ಚವನ್ನು ಡಿಸಿಎಂ ಅಶ್ವತ್ಥ್ ನಾರಾಯಣ್ ಅವರು ಭರಿಸುವುದಾಗಿ ಹೇಳಿದ್ದು, ವಿಜಯ್ ಸಹೋದರ ಸಿದ್ದೇಶ್ ಅಶ್ವತ್ಥ್ ನಾರಾಯಣ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.