ಹಿರಿಯ ಹಾಸ್ಯ ನಟ, ನಿರ್ಮಾಪಕ ದ್ವಾರಕೀಶ್ ಇನ್ನಿಲ್ಲ…!
ಬೆಂಗಳೂರು ಪ್ರಜಾಕಿರಣ.ಕಾಮ್ : ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ನಟ, ನಿರ್ಮಾಪಕ ಹಾಗೂ ನಿರ್ದೇಶಕರಾಗಿದ್ದ ದ್ವಾರಕೀಶ್ (81) ಇಹಲೋಕ ತ್ಯಜಿಸಿದರು.
ಅವರು ಕಳೆದ ಹಲವು ದಿನಗಳಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಿಸದೆ ಮಂಗಳವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ.
ನಟ ದ್ವಾರಕೀಶ್ 1942ರ ಆಗಸ್ಟ್ 19ರಂದು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಜನಿಸಿದ್ದರು.
1963ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ದ್ವಾರಕೀಶ್, 1964ರಲ್ಲಿ ವೀರ ಸಂಕಲ್ಪ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು.
ಕನ್ನಡದ ನೂರಾರು ಸಿನಿಮಾಗಳಲ್ಲಿ ದ್ವಾರಕೀಶ್, ನಟರಾಗಿ, ಹಾಸ್ಯ ಕಲಾವಿದರಾಗಿ, ಪೋಷಕ ನಟನಾಗಿ ಮನೋಜ್ಞವಾಗಿ ಅಭಿನಯಿಸಿದ್ದಾರೆ.
ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಜೋಡಿ ಕಳ್ಳ-ಕುಳ್ಳ ಎಂದೇ ಇಂದಿಗೂ ಜನಮಾನಸದಲ್ಲಿ ಅಚ್ಚೋತ್ತಿದೆ.
1969ರಲ್ಲಿ ಡಾ.ರಾಜಕುಮಾರ್ ಅಭಿನಯದ ಮೇಯರ್ ಮುತ್ತಣ್ಣ ಸಿನಿಮಾ ದ್ವಾರಕೀಶ್ ನಿರ್ಮಾಣದ ಪ್ರಥಮ ಚಿತ್ರವಾಗಿದೆ.
ಸುಮಾರು 40ಕ್ಕೂ ಹೆಚ್ಚು ಚಿತ್ರಗಳು ಅವರ ನಿರ್ಮಾಣದಲ್ಲಿ ಹೊರಬಂದಿವೆ. ಇತ್ತೀಚೆಗೆ ಆಪ್ತಮಿತ್ರ ಮೂಲಕ ತಮಗಾದ ನಷ್ಟವನ್ನು ಭರಿಸಿಕೊಂಡು ಸ್ವಲ್ಪಮಟ್ಟಿಗೆ ಚೇತರಿಸಿಕೊಂಡಿದ್ದರು.
ಚಿತ್ರ ನಿರ್ಮಾಣದ ಜೊತೆ ನಿರ್ದೇಶನ ಸ್ಥಾನವನ್ನು ಕೂಡ ಸಮರ್ಥವಾಗಿ ನಿರ್ವಹಿಸಿದ್ದ ದ್ವಾರಕೀಶ್, ಡಾನ್ಸ್ ರಾಜಾ ಡಾನ್ಸ್, ಶ್ರುತಿ, ರಾಯರು ಬಂದರು ಮಾವನ ಮನೆಗೆ ಸೇರಿದಂತೆ 15ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ನಟ ದ್ವಾರಕೀಶ್ ತಮ್ಮ ʻದ್ವಾರಕೀಶ್ ಚಿತ್ರʼ ಬ್ಯಾನರ್ ಅಡಿಯಲ್ಲಿ ಡಾ.ರಾಜ್ಕುಮಾರ್, ವಿಷ್ಣುವರ್ಧನ್ನಂತಹ ದಿಗ್ಗಜರ ಸಿನಿಮಾಗಳನ್ನು ನಿರ್ಮಿಸಿದ್ದ ಹಿರಿಮೆ ಹೊಂದಿದ್ದಾರೆ.
ಅವರ ಅಗಲಿಕೆಯಿಂದಾಗಿ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವನ್ನು ಉಂಟು ಮಾಡಿದೆ ಎಂದು ಅನೇಕ ಹಿರಿಯರು, ಗಣ್ಯರು ಕಂಬನಿ ಮಿಡಿದಿದ್ದಾರೆ.