- ಧಾರವಾಡ prajakiran.com : ಐದು ಸಾವಿರ ರೂಪಾಯಿ ಹಣಕ್ಕೆ ಹಾಡಹಗಲೇ ವಯೋವೃದ್ದನ ಮೇಲೆ ಹಲ್ಲೆ ಮಾಡಿದ ಇಬ್ಬರು ಕಿರಾತಕರು ಅಂದರ್ ಆದ ಘಟನೆ ಧಾರವಾಡದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಧಾರವಾಡ ಸಿಬಿಟಿಯಿಂದ ಆಟೋ ಹತ್ತಿದ್ದ ಹಿರಿಯ ನಾಗರಿಕ ನಾರಾಯಣ ಜಾಧವ ಮಗಳ ಮನೆಗೆ ಕರಿಕಟ್ಟಿ ಗ್ರಾಮಕ್ಕೆ ಹೋಗಲು ಹತ್ತಿದ್ದ.
ಈ ಅಜ್ಜನ ಬಳಿ ಹಣವಿರುವುದನ್ನು ಖಾತ್ರಿ ಪಡಿಸಿದಕೊಂಡ ಹಾಜಿ ಅಲಿ ಹಾಗೂ ತಾಹೀರ್ ಸವಾರ ಆಟೋ ಚಾಲಕ ಸೈಯದ್ ಜೊತೆಗೆ ಸೇರಿಕೊಂಡು ಹಣ ದೋಚಲು ಸಂಚು ರೂಪಿಸಿದ್ದಾರೆ.
ಕೃಷಿ ವಿವಿ ಬಳಿಯ ಪೆಪ್ಸಿ ಫ್ಯಾಕ್ಟರಿ ಬಳಿ ಹಿರಿ ಜೀವವನ್ನು ಆಟೋ ದಿಂದ ಕೆಳಗೆ ಇಳಿಸಿ ಹಲ್ಲೆ ಮಾಡಿದ್ದಾರೆ.
ಈ ವೇಳೆ ಇದನ್ನು ಗಮನಿಸಿದ ಸ್ಥಳೀಯರು ಅನುಮಾನಗೊಂಡು ಪ್ರಶ್ನಿಸಿದಾಗ ಹಣ ಕಸಿದುಕೊಳ್ಳಲು ಹವಣಿಸಿದ ಗ್ಯಾಂಗ್ ಕೃತ್ಯ ಬಯಲಿಗೆ ಬಂದಿದೆ.
ಆಗ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಕೆಲವರು ಹಾಗೂ ದಾರಿಯಲ್ಲಿ ತೆರಳುತ್ತಿದ್ದ ಕೆಲವರು ವಿಚಾರಿಸಿ ಅವರಿಬ್ಬರಿಗೂ ಧರ್ಮದ ಏಟು ನೀಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದರಿಂದಾಗಿ ಸ್ಥಳದಲ್ಲಿ ಕೆಲ ಕಾಲ ಬಿಗುವಿನ ವಾತವರಣ ನಿರ್ಮಾಣ ಆಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ಪ್ರಜಾಕಿರಣ.ಕಾಮ್ ಗೆ ಖಚಿತ ಪಡಿಸಿದ್ದಾರೆ.
ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿದ ಧಾರವಾಡ ಉಪನಗರ ಪೊಲೀಸರು ಇಬ್ಬರು ಕಿರಾತಕರರಾದ ತಾಹಿರ್ ಸವಾರ ಹಾಗೂ ಹಾಜಿ ಅಲಿಯನ್ನು ವಶಕ್ಕೆ ತೆಗೆದುಕೊಂಡು ಇನ್ನೊಬ್ಬ ಆಟೋ ಚಾಲಕ ಸೈಯದ್ ನ ಹುಡುಕಾಟಕ್ಕೆ ಜಾಲಬೀಸಿದ್ದಾರೆ.
ಈ ಕುರಿತು ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.