ಹುಬ್ಬಳ್ಳಿ prajakiran.com : ಟ್ರ್ಯಾಕ್ಟರ್ ಪಲ್ಟಿಯಾಗಿ ಇಬ್ಬರು ಸಾವನ್ನಪ್ಪಿದ್ದ ಘಟನೆ ಹುಬ್ಬಳ್ಳಿ ತಾಲೂಕು ಕುಸುಗಲ್ಲ ಗ್ರಾಮದ ಇಂಗಳಹಳ್ಳಿ ರಸ್ತೆಯಲ್ಲಿ ಶುಕ್ರವಾರ ನಡೆದಿದೆ.
ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
ಮೃತರನ್ನು ಕುಸುಗಲ್ ಗ್ರಾಮದ ಉಸ್ಮಾನಸಾಬ ಖಾದರಸಾಬ ಡಂಬಳ (30) ಹಾಗೂ ಅಭಿಷೇಕ ಸಿದ್ದಪ್ಪ ಈರಣ್ಣವರ (16) ಎಂದು ಗುರುತಿಸಲಾಗಿದೆ. ಅಬ್ದುಲ್ ಕಡೇಮನಿ (69) ಎಂಬುವರೇ ಗಾಯಗೊಂಡಿದ್ದಾರೆ.
ಕುಸುಗಲ್ ಗ್ರಾ.ಪಂ ವಾರ್ಡ್ ನಂ4 ರ ಸದಸ್ಯೆ ಲಕ್ಷ್ಮೀಭಾಯಿ ಈರಣ್ಣವರ ಏಕೈಕ ಪುತ್ರನಾಗಿದ್ದ ಅಭಿಷೇಕ್, ಬೆಳಿಗ್ಗೆ ಹೊಲ ಹರಗಲು ಟ್ರ್ಯಾಕ್ಟರ್ ನಲ್ಲಿ ಕೆಲಸಕ್ಕೆ ಹೋಗಿದ್ದ.
ಬರುವಾಗ ಈ ದುರಂತ ಸಂಭವಿಸಿದೆ. ಅಭಿಷೇಕ್ ತಂದೆಯಿಲ್ಲದೇ, ತಾಯಿಯ ಪ್ರೀತಿಯಲ್ಲಿ ಬೆಳೆದಿದ್ದ. ಅದೇ ರೀತಿ ರೈಲ್ವೆ ಉದ್ಯೋಗಿಯಾಗಿದ್ದ ಖಾದರಸಾಬ ಡಂಬಳ ಅವರ ಮೂವರು ಪುತ್ರರಲ್ಲಿ ನಡುವಿನ ಮಗ ಉಸ್ಮಾನ್ ಸಾಬ ಕುಸುಗಲ್ಲ ಐಡಿಬಿಐ ಬ್ಯಾಂಕ್ ಉದ್ಯೋಗಿಯಾಗಿದ್ದ.
ಬೆಳಿಗ್ಗೆ ಬೇಗ ಕೆಲಸಕ್ಕೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಹೋಗಿದ್ದ.
ಕೆಲಸ ಮುಗಿಸಿ ಮನೆಗೆ ಹಿಂದಿರುಗುವಾಗ ರಸ್ತೆಯಲ್ಲಿಕಾದು ಕುಳಿತ ಜವರಾಯನ ಅಟ್ಟಹಾಸಕ್ಕೆ ಇಬ್ಬರು ಬಲಿಯಾಗಿದ್ದಾರೆ.
ಕರೋನಾ ವಾರಿಯರ್ಸ್ ಆದೇಶಕ್ಕೆ ಬೆಲೆ ನೀಡಿದೇ ಜನರು ಮುಗಿಬಿದ್ದರು.ಸುದ್ಧಿ ತಿಳಿದ ತಕ್ಷಣ ಕುಸುಗಲ್ ಗ್ರಾಮಸ್ಥರು ತಂಡೋಪ ತಂಡವಾಗಿ ಸ್ಥಳಕ್ಕೆ ಧಾವಿಸಿದರು.
ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.