ಬೆಂಗಳೂರು prajakiran.com : ಬಿಜೆಪಿ ಹೈಕಮಾಂಡ್ ನಾಯಕರಲ್ಲಿ ಒಬ್ಬರಾಗಿರುವ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಶುಕ್ರವಾರ ರಾಜ್ಯದ ಇಬ್ಬರು ಸಚಿವರು ಪ್ರತ್ಯೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದರು.
ಅದರಲ್ಲೂ ಎರಡು ಪ್ರಮುಖ ವಿಚಾರಗಳ ಕುರಿತು ಇಬ್ಬರು ಸಚಿವರಿಂದ ಮಾಹಿತಿ ಸಂಗ್ರಹಿಸಿದ್ದಾರೆ ಎನ್ನಲಾಗಿದೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಬಳಿ ಬೆಂಗಳೂರು ಡಿ.ಜೆ. ಹಳ್ಳಿ ಗಲಾಟೆ ಕುರಿತು ಸಂಪೂರ್ಣ ವರದಿ ಪಡೆದಿದ್ದಾರೆ.
ಅಲ್ಲದೆ, ಮುಂದೆ ಕೈ ಗೊಳ್ಳಬೇಕಾದ ಕ್ರಮಗಳು ಕುರಿತು ಸಮಾಲೋಚನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಅದೇ ರೀತಿ ವೈದ್ಯಕೀಯ ಶಿಕ್ಷಣ ಡಾ. ಕೆ. ಸುಧಾಕರಅವರ ಜೊತೆಗೆ ರಾಜ್ಯದ ಕೋವಿಡ್ ಸ್ಥಿತಿಗತಿ ಬಗ್ಗೆ ವರದಿ ಕೇಳಿದ್ದಾರೆ. ಇನ್ನು ಟೆಸ್ಟಿಂಗ್ ಹೆಚ್ಚಳ ಮಾಡುವಂತೆ ಹಾಗೂ ವಿಶೇಷವಾಗಿ ಕರೋನಾ ವಾರಿಯರ್ ಭದ್ರತೆ, ಕಾಳಜಿವಹಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಸಚಿವ ಸ್ಥಾನ ಸಿಗದೆ ಮುನಿಸಿಕೊಂಡಿರುವ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಮುರುಗೇಶ ನಿರಾಣಿ ಕೂಡ ಭೇಟಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿಂದೆ ಸಂತೋಷಜಿ ಅವರನ್ನು ಸಚಿವರಾದ ರಮೇಶ ಜಾರಕಿಹೊಳಿ ಸೇರಿದಂತೆ ಅನೇಕರು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.
ಹಾಗಿದ್ದರೆ ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲವಾ, ಬಣ ರಾಜಕೀಯ ಇನ್ನು ಮುಂದುವರೆದಿದೆಯಾ. ಬಿಎಸ್ ವೈ ವೇಗಕ್ಕೆ ಬ್ರೇಕ್ ಹಾಕಲು ಹಾಗೂ ನಿಯಂತ್ರಣ ಸಾಧಿಸಲು ಎರಡು ಗುಂಪುಗಳ ನಾಯಕರು ಮುಂದಾಗಿದ್ದಾರೆಯೇ ಎಂಬ ಪ್ರಶ್ನೆ ಎದುರಾಗಿದೆ.
ಅಲ್ಲದೆ, ಸಚಿವರುಗಳ ಕಾರ್ಯವೈಖರಿ ಅವಲೋಕನಕ್ಕೆ ಹೈ ಕಮಾಂಡ್ ಮುಂದೆಯಾಗಿದೆಯಾ ಎಂಬುದು ಪಕ್ಷದೊಳಗೆ ಚರ್ಚೆ ನಡೆದಿದೆ
ರಾಜ್ಯ ಕಚೇರಿಗೆ ಕರೆಸಿಕೊಂಡು ಇಬ್ಬರ ಸಚಿವರ ಜೊತೆಗೆ ಚರ್ಚಿಸಿರುವುದು ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.