ಧಾರವಾಡ prajakiran.com : ನಗರದ ಸುವರ್ಣ ಪೆಟ್ರೊಲ್ ಬಂಕ್ ಬಳಿ ಲಾರಿ ಚಾಲಕನನ್ನು ತಡೆದು ನಗದು, ಮೊಬೈಲ್ ದೋಚಿದ್ದ ಇಬ್ಬರನ್ನು ಬಂಧಿಸುವಲ್ಲಿ ಧಾರವಾಡದ ವಿದ್ಯಾಗಿರಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಹಾವೇರಿಪೇಟೆಯ ನಿರುದ್ಯೋಗಿ ಮಹ್ಮದಅಬ್ಬಾಸ ಅಬ್ದುಲ್ಗಣಿ ನಾಯ್ಕರ್ (೩೪) ಹಾಗೂ ಕಂಠಿ ಗಲ್ಲಿಯ ಆಟೋ ಚಾಲಕ ಮಹ್ಮದ್ಆಸೀಫ್ ಜೈಲಾನಿ ಮುಲ್ಲಾ (೨೫) ಎಂದು ಗುರುತಿಸಲಾಗಿದೆ. ಇವರಿಬ್ಬರೂ ಫೆ. ೨೦ರಂದು ಆಟೋದಲ್ಲಿ ತೆರಳಿ ಲಾರಿ ಚಾಲಕನನ್ನು ಅಡ್ಡಗಟ್ಟಿ ಮೊಬೈಲ್, ನಗದು ಕಸಿದು ಪರಾರಿಯಾಗಿದ್ದರು.
ಬಂಧಿತರಿಂದ ಆಟೋ, ಮೊಬೈಲ್, ೩೦೦ ರೂ. ನಗದು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಇನ್ಸಪೆಕ್ಟರ್ ಮಹಾಂತೇಶ ಬಸಾಪೂರ, ಪಿಎಸ್ ಐಗಳಾದ ಸಚಿನಕುಮಾರ್ ದಾಸರಡ್ಡಿ, ಎಸ್.ಆರ್. ತೇಗೂರ, ಎಎಸ್ ಐ ಬಿ.ಎಂ. ಅಂಗಡಿ, ಪೊಲೀಸರಾದ ಎ.ಬಿ. ನರೇಂದ್ರ , ಎಂ.ಎಫ್. ನದಾಫ್, ಐ.ಪಿ. ಬುರ್ಜಿ, ಆರ್.ಕೆ. ಅತ್ತಾರ, ಎಂ.ಸಿ. ಮಂಕಣಿ, ಬಿ.ಎಂ. ಪಠಾತ್, ಎಂ.ಜಿ. ಪಾಟೀಲ, ಬಸವರಾಜ ಸವಣೂರು ಪಾಲ್ಗೊಂಡಿದ್ದರು.