ಬೆಂಗಳೂರು prajakiran.com : ಕರೋನಾ ಹೆಮ್ಮಾರಿ ಕರುನಾಡನ್ನು ಬೆಂಬಿಡದೆ ಕಾಡುತ್ತಲೇ ಇದೆ. ಸೋಮವಾರ ಮತ್ತೇ ಕರೋನಾ ಸೋಂಕು ನೂರರ ಸಮೀಪ ಬಂದಿದೆ. ಬೆಳಗ್ಗೆ 69 ಪ್ರಕರಣ ಬಂದರೆ, ಸಂಜೆ ಮತ್ತೇ 24 ಕೇಸ್ ಪತ್ತೆಯಾಗುವ ಮೂಲಕ 93ಕ್ಕೆ ಬಂದು ನಿಂತಿದೆ.
ಬೆಳಗ್ಗೆಯಷ್ಟೇ ಉಡುಪಿಯಲ್ಲಿ 16 ಪ್ರಕರಣಗಳು ದೃಢಪಟ್ಟಿದ್ದವು. ಮತ್ತೇ ಸಂಜೆ ವೇಳೆ ಬರೋಬ್ಬರಿ 16 ಪ್ರಕರಣಗಳು ಕಾಣಿಸಿಕೊಳ್ಳುವ ಮೂಲಕ ಒಂದೇ ದಿನ 32 ಪ್ರಕರಣಗಳು ಕೇವಲ ಒಂದೇ ಜಿಲ್ಲೆಯಲ್ಲಿ ಕಾಣಿಸಿಕೊಂಡಂತಾಗಿದೆ.
ಇನ್ನೂ ಬಿಸಲನಾಡು ಕಲಬುರಗಿಯಲ್ಲಿ ಬೆಳಗ್ಗೆಯಷ್ಟೇ 14 ಪ್ರಕರಣಗಳು ಕಂಡು ಬಂದಿದ್ದವು. ಮತ್ತೇ ಸಂಜೆ ವೇಳೆಗೆ 2 ಪ್ರಕರಣಗಳು ದೃಢಪಡುವ ಮೂಲಕ 16ಕ್ಕೆ ಏರಿಕೆಯಾಗಿದೆ.
ಅದೇ ರೀತಿ ವಿದ್ಯಾನಗರಿ ಧಾರವಾಡ ಜಿಲ್ಲೆಯಲ್ಲಿ ಬೆಳಗ್ಗೆ ಎರಡೂವರೆ ವರ್ಷದ ಮಗು ಸೇರಿ ಮೂರು ಜನರಿಗೆ ಸೋಂಕು ವಕ್ಕರಿಸಿಕೊಂಡಿತ್ತು.
ಸಂಜೆ ಮತ್ತೊಂದು ಪ್ರಕರಣ ದೃಢಪಡುವ ಮೂಲಕ ಧಾರವಾಡ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4ಕ್ಕೆ ಏರಿಕೆಯಾದಂತಾಗಿದೆ.
ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಬೆಳಗ್ಗೆ 6 ಪ್ರಕರಣ ದೃಢಪಟ್ಟಿದ್ದವು. ಸಂಜೆ ಮತ್ತೇರಡು ಪ್ರಕರಣ ಕಾಣಿಸಿಕೊಳ್ಳುವ ಮೂಲಕ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಬೆಳಗ್ಗೆ ಯಾವುದೇ ಪ್ರಕರಣಗಳಿಲ್ಲದೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದ ಹಾಸನ,
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಗ್ಗೆ 3 ಪ್ರಕರಣಗಳು ಬೆಳಕಿಗೆ ಬಂದಿದ್ದವು. ಸಂಜೆ ಮತ್ತೊಂದು ಕಾಣಿಸಿಕೊಳ್ಳುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಸೋಂಕಿತರ ಸಂಖ್ಯೆ ಇಂದು ನಾಲ್ಕಕ್ಕೆ ಏರಿಕೆಯಾದಂತಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ತಲಾ ಒಂದು ಪ್ರಕರಣ ಕಂಡು ಬರುವ ಮೂಲಕ ತುಸು ಆತಂಕ ಸೃಷ್ಟಿಸಿವೆ.
ಇನ್ನೂ ಬೆಳಗ್ಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 55 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಅವರು ಮೇ 19ರಂದು ನಿಯೋಜಿತ ಆಸ್ಪತ್ರೆಗೆ ದಾಖಲಾಗಿದ್ದರು. ಆರು ದಿನಗಳಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಸಂಜೆ ವರದಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 43 ವರ್ಷದ ಪುರುಷ ದೀರ್ಘಕಾಲೀನ ಯಕೃತ ರೋಗದ ಹಿನ್ನಲೆಯಲ್ಲಿ ಮತ್ತು ಮೂತ್ರಕೋಶ ಸಂಬಂಧಿತ ತೊಂದರೆಯಿಂದ ಮೇ 23 ರಂದು ಆಸ್ಪತ್ರೆಗೆದಾಖಲಾಗಿದ್ದರು.
ಅವರು ಅದೇ ದಿನ ಮರಣ ಹೊಂದಿದ್ದಾರೆ. ಮೇ 25ರಂದು ಅವರಿಗೆ ಕರೋನಾ ದೃಢಪಟ್ಟಿದೆ. ಇವತ್ತು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 51 ಜನ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
ಆ ಮೂಲಕ ಒಟ್ಟು 705 ಜನ ಬಿಡುಗಡೆಗೊಂಡಂತಾಗಿದೆ. ಒಟ್ಟು ಸಕ್ರಿಯ 1431 ಪ್ರಕರಣಗಳಿವೆ. ಸಾವನ್ನಪ್ಪಿದ್ದವರ ಸಂಖ್ಯೆ 44ಕ್ಕೆ ಏರಿದಂತಾಗಿದೆ.