ನವದೆಹಲಿ ಪ್ರಜಾಕಿರಣ. ಕಾಮ್ : ರಾಜ್ಯದ ವಿಧಾನ ಸಭಾ ಚುನಾವಣೆಗೆ ದಿನಾಂಕ ನಿಗದಿಯಾದ ಬೆನ್ನಲ್ಲೇ ಧಾರವಾಡ ಜಿಲ್ಲೆಯ ಪ್ರವೇಶವನ್ನು ಮಾಡಲು ಅವಕಾಶ ನೀಡಬೇಕು ಎಂದು ಕೋರಿ ಮಾಜಿ ಸಚಿವ ವಿನಯ ಕುಲಕರ್ಣಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ಇತ್ಯರ್ಥಪಡಿಸಿ ಮಹತ್ವದ ಆದೇಶ ಹೊರಡಸಿದೆ.
ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠದ ನ್ಯಾಯಮೂರ್ತಿ ಗಳಾದ ಅಜಯ್ ರುಸ್ತೋಗಿ ಹಾಗೂ ಬೇಲಾ ಎಂ. ತ್ರಿವೇದಿ ಅವರು ಈ ಮಹತ್ವದ ಆದೇಶವನ್ನು ಹೊರಡಿಸಿದರು.
ಇದೇ ವೇಳೆ ವಾರಕ್ಕೆ ಎರಡು ಸಲ ಸಿಬಿಐ ಕಚೇರಿಗೆ ಹಾಜರಾಗಿ ಸಹಿ ಹಾಕುವುದಕ್ಕೆ ಇದ್ದ ಆದೇಶವನ್ನು ಸಡಿಲಪಡಿಸಿ ಪ್ರತಿ ತಿಂಗಳ ಮೊದಲ ಶನಿವಾರ ಮಾತ್ರ ಸಹಿ ಹಾಕಲು ಅವಕಾಶ ಕಲ್ಪಿಸಿದೆ.
ಚುನಾವಣೆಗೆ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಅವಕಾಶ ಕಲ್ಪಿಸಬೇಕು ಎಂದು ವಿನಯ ಕುಲಕರ್ಣಿ ಪರ ವಕೀಲರಾದ ಸಿದ್ದಾರ್ಥ ಭಟ್ನಾಗರ ನ್ಯಾಯಮೂರ್ತಿಗಳ ಗಮನ ಸೆಳೆದರು.
ಆದರೆ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠದ ನ್ಯಾಯಮೂರ್ತಿ ಗಳು
ಇದಕ್ಕೆ ಅವಕಾಶ ನಿರಾಕರಿಸಿದರು.
ಸಿಬಿಐ ಪರ ಎಡಿಸನಲ್ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ವಾದ ಮಂಡಿಸಿದರು.
ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಪಂ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐಯ ರಾಕೇಶ ರಂಜನ್ ನೇತೃತ್ವದ ತಂಡ ಬಂಧಿಸಿತ್ತು,
ಆನಂತರ ಒಂಬತ್ತು ತಿಂಗಳ ಕಾಲ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಇದ್ದರು. ಅವರಿಗೆ ಜಾಮೀನು ನೀಡಲು ಧಾರವಾಡ ಜಿಲ್ಲೆಯ ನ್ಯಾಯಾಲಯ, ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ,ಹೈಕೋರ್ಟ್ ನಿರಾಕರಿಸಿತ್ತು.
ಕೊನೆಗೆ ಸುಪ್ರೀಂ ಕೋರ್ಟ್ ಕೊಲೆ ಪ್ರಕರಣದ ಸಾಕ್ಷಿ ನಾಶ ಮಾಡಿದ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯ ಪ್ರವೇಶ ನಿಷೇಧಿಸಿ ಷರತ್ತು ಬದ್ಧ ಜಾಮೀನು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು