ಧಾರವಾಡ : ಜೂನ್ ೨೫, ೨೦೨೦ ರಿಂದ ಎಸ್ಎಸ್ಎಲ್ಸಿ ಪರೀಕ್ಷೆ ಪ್ರಾರಂಭವಾಗಿದ್ದು, ಧಾರವಾಡ ಜಿಲ್ಲಾಡಳಿತ ಎಲ್ಲ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ.
ಧಾರವಾಡದ ಕೆಎನ್ಕೆ ಶಾಲೆಯ ವಿದ್ಯಾರ್ಥಿನಿ ಕು. ತಬಸೂಮ್ ಸತತವಾಗಿ ಎರಡು ಪರೀಕ್ಷೆಗಳಿಗೆ ಗೈರು ಹಾಜರಾಗಿದ್ದಳು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮೋಹನ ಹಂಚಾಟೆ ಅವರು ಖುದ್ದಾಗಿ ಬಾಲಕಿಯ ಪಾಲಕರ ಮನವೊಲಿಸಿ ಸೋಮವಾರ ಜೂನ್ ೨೯ ರಂದು ನಡೆದ ವಿಜ್ಞಾನ ಪರೀಕ್ಷೆಗೆ ಹಾಜರಾಗಲು ಧೈರ್ಯ ತುಂಬಿದರು.
ಪರೀಕ್ಷಾ ಕೇಂದ್ರ ಕರ್ನಾಟಕ ಪ್ರೌಢ ಶಾಲೆಯಲ್ಲಿ ಮಗುವಿಗೆ ಪುಷ್ಪ ನೀಡಿ ಪರೀಕ್ಷೆ ಬರೆಯಲು ಪ್ರೋತ್ಸಾಹಿಸಿದರು.
ತಂಡದಲ್ಲಿ ಧಾರವಾಡ ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ.ಎ. ಖಾಜಿ, ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಂ.ವಿ. ಅಡಿವೇರ, ಬಿಆರ್ಪಿ ಫಿರೋಜ ಗುಡೇನಕಟ್ಟಿ, ಪೊಲೀಸ್ರಾದ ಅನೀಲ್ ಕೋತ್ ಮಗುವನ್ನು ಪರೀಕ್ಷಾ ಕೇಂದ್ರ ಕರ್ನಾಟಕ ಪ್ರೌಢ ಶಾಲೆಯ ಮುಖ್ಯ ಅಧೀಕ್ಷಕರಾದ ಸವಣೂರ ಅವರಿಗೆ ಭೇಟಿ ಮಾಡಿಸಿ, ಮಗುವಿಗೆ ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ಯಾನ್ ಮಾಡಿಸಿ, ನಿಗದಿತ ಕೊಠಡಿಯಲ್ಲಿ ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡಿಸಿದರು.
ಅದೇ ರೀತಿ ಧಾರವಾಡ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ ಬೊಮ್ಮಕ್ಕನವರ ನೇತೃತ್ವದಲ್ಲಿ ಜಿಹೆಚ್ಎಸ್ ಕೋಟೂರಿನ ರೇವಣ್ಣಾ ಹರಿಜನ ಮತ್ತು ಅಳ್ನಾವರದ ಮಿಲತ್ ಪ್ರೌಢಶಾಲೆಯ ವಿದ್ಯಾವತಿ ಕುರುಬೆಟ್ಟ ಈ ಮಕ್ಕಳನ್ನು ನಿಗದಿತ ಪರೀಕ್ಷಾ ಕೇಂದ್ರಗಳಿಗೆ ಸರಕಾರಿ ವಾಹನದಲ್ಲಿ ಕರೆ ತಂದು ನಿಗದಿತ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟರು.
ಈ ತಂಡದಲ್ಲಿ ಸುರಕ್ಷಾಪಡೆ ಮುಖ್ಯಸ್ಥರಾದ ಕೆ.ಎಂ. ಶೇಖ ಹಾಗೂ ಬಿಆರ್ಪಿ ಸತ್ತೂರ ಹಾಜರಿದ್ದರು.
ಇದೇ ವೇಳೆ ನವಲಗುಂದನ ಮಾಡೆಲ್ ಬಾಲಕಿಯರ ಪ್ರೌಢಶಾಲೆ ಹತ್ತನೇ ತರಗತಿ ವಿದ್ಯಾರ್ಥಿನಿ ಶ್ರೀದೇವಿ ಮದನೂರ ಜ್ವರದಿಂದ ಬಳಲುತ್ತಿದ್ದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಳು.
ಸದ್ಯ ಆ ವಿದ್ಯಾರ್ಥಿನಿ ಬಿಸಿಎಂ ವಸತಿ ನಿಲಯದಲ್ಲಿದ್ದಳು. ಹೀಗಾಗಿ ನವಲಗುಂದ ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ ಪದಕಿ ಅವರು ಆಸ್ಪತ್ರೆಗೆ ತೆರಳಿ ಮಗುವಿಗೆ ಹಾಗೂ ಪಾಲಕರಿಗೆ ಧೈರ್ಯ ತುಂಬಿ ಬೇಗ ಗುಣವಾಗಿ ಪ್ರಥಮ ಅವಕಾಶದಲ್ಲಿ ಪೂರಕ ಪರೀಕ್ಷೆ ಬರೆಯುವಂತೆ ಹೇಳಿದರು.
ಧಾರವಾಡ ಜಿಲ್ಲೆಯಲ್ಲಿ ಯಾವುದೇ ಮಗು ಪರೀಕ್ಷೆಯಿಂದ ವಂಚಿತವಾಗದಂತೆ ಗೈರಾದ ಮಕ್ಕಳ ಮನವೊಲಿಸಿ ಪರೀಕ್ಷೆಗೆ ಹಾಜರಾಗುವಂತೆ ಮಾಡಲು ಎಲ್ಲ ರೀತಿಯ ಕ್ರಮ ಕೈಗೊಳ್ಳ್ಳುವಂತೆ ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಉಪನಿರ್ದೇಶಕರು ಕರೆ ನೀಡಿರುವುದು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಾರ್ಯವೈಖರಿಗೆ ಪಾಲಕರು ಹಾಗೂ ಸ್ಥಳೀಯ ಜನತೆ ಮೆಚ್ಚುಗೆ ವ್ಯಕ್ತಪಡಿಸಿ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.