ಬೆಳಗಾವಿ prajakiran.com : ತಳ್ಳೋಗಾಡಿಯಲ್ಲಿ ಪತಿಯ ಶವ ಹಾಕಿಕೊಂಡು ಬಲು ದೂರ ಸಾಗಿದ ಪತ್ನಿಯೇ ತನ್ನ ಪತಿಯ ಅಂತ್ಯಸಂಸ್ಕಾರ ಮಾಡಿದ ಹೃದಯವಿದ್ರಾವಕ ಘಟನೆ ಡಿಸಿಎಂ ಲಕ್ಷ್ಮಣ ಸವದಿ ತವರು ಜಿಲ್ಲೆಯಾದ ಗಡಿನಾಡು ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಹೌದು ಇಂತಹ ಅಮಾನವೀಯ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ.
ಮೃತ ವ್ಯಕ್ತಿ ಅಥಣಿ ಪಟ್ಟಣದ ಸರ್ಕಾರಿ ಆಸ್ಪತ್ರೆ ಮುಂದೆ ಚಪ್ಪಲಿ ಹೊಲೆಯುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದ ಎಂದು ತಿಳಿದು ಬಂದಿದೆ.
ಏನೇ ಇದ್ದರೂ ಇಂತಹ ಸನ್ನಿವೇಶಗಳನ್ನ ನೋಡಿಯಾದರೂ ಯಾರೊಬ್ಬರು ಸಹಾಯ ಹಸ್ತ ಚಾಚದಿರುವುದು ಮಾನವೀಯತೆ ಸತ್ತು ಹೋಗಿದೆಯಾ ಎಂಬ ಪ್ರಶ್ನೆ ಎದುರಾಗಿದೆ.
ಅನಾರೋಗ್ಯದಿಂದ ಬಳಲಿ ತನ್ನ ಮನೆಯಲ್ಲೇ ನಿನ್ನೆ ತಡರಾತ್ರಿ ಮಲಗಿದ್ದಲ್ಲೇ ಅಸುನೀಗಿದ್ದ ವ್ಯಕ್ತಿಗೆ ಕೊರೋನಾದಿಂದ ಸಾವನಪ್ಪಿರಬಹುದೆಂದು ಸಂಬಂಧಿಕರು ಶವಸಂಸ್ಕಾರಕ್ಕೆ ಬಾರದೇ ದೂರ ಉಳಿದಿದ್ದರು.
ಹೀಗಾಗಿ ಯಾರು ಅಂತ್ಯ ಸಂಸ್ಕಾರಕ್ಕೆ ಬಾರದ ಹಿನ್ನೆಲೆಯಲ್ಲಿ ಪತ್ನಿ ತಾನೇ ಬಟ್ಟೆಯಲ್ಲಿ ಪತಿಯ ಶವ ಸುತ್ತಿ ತಳ್ಳೋಗಾಡಿಯಲ್ಲಿ ಶವ ಸಾಗಿಸಿ ಆನಂತರ ಸಂಸ್ಕಾರ ನೆರವೇರಿಸಿದ್ದಾಳೆ. ಇದು ನಿಜಕ್ಕೂ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ.
ಇದಕ್ಕೆ ಸಂಬಂಧಪಟ್ಟ ಬೆಳಗಾವಿ ಜಿಲ್ಲಾಡಳಿತ, ತಾಲೂಕು ಆಡಳಿತ ಯಾವ ರೀತಿಯ ಪ್ರತಿಕ್ರಿಯೆ ನೀಡಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತದೆ ಎಂಬುದು ಕಾದು ನೋಡಬೇಕಿದೆ.