ಸೋಮು ರಡ್ಡಿ ಅವರ ಹೊಸ ನಾಟಕ
ಧಾರವಾಡ prajakiran.com : ವಿಶ್ವ ರಂಗಭೂಮಿ ದಿನದ ಪ್ರಯುಕ್ತ ಮಾ.27 ರಂದು ಸಂಜೆ ೬ ಗಂಟೆಗೆ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು ಅವರ ಸಹಯೋಗದಲ್ಲಿ ತಲಾಷ್ ನಾಟಕ ಖ್ಯಾತಿಯ ಸೋಮು ರೆಡ್ಡಿ ಅವರ ಹೊಸ ನಾಟಕ ’ದ್ವಂದ್ವ’ ಪ್ರದರ್ಶನವಾಗಲಿದೆ.
ಸರ್ಕಾರಿ ಹುದ್ದೆಯಲ್ಲಿರುವ ಕ್ಯಾನ್ಸರ್ ರೋಗಿಯೊಬ್ಬನ ಆತ್ಮಕಥನದಂತಿರುವ ಈ ನಾಟಕ ಮಾನವೀಯ ಸಂಬಂಧಗಳು, ಮಗ-ತಂದೆ-ಸೊಸೆಯ ನಡುವಿರುವ ಕೌಟುಂಬಿಕ ಕಲಹಗಳು, ಮನಸ್ಥಾಪಗಳು ಹೀಗೆ ಒಟ್ಟಾರೆ ವರ್ತಮಾನದ ಕೌಟುಂಬಿಕ ಮತ್ತು ಸಾಮಾಜಿಕ ತಲ್ಲಣಗಳ ಮಿಶ್ರಣವನ್ನೇ ತೆರೆದಿಡುತ್ತದೆ.
ಕೇವಲ ಐದು ಪಾತ್ರಗಳಲ್ಲಿ ನಿರೂಪಿತವಾಗಿ ಸ್ಫುಟವಾದ ಮಾತು ಮತ್ತು ಭಾವ ಪ್ರಧಾನ ನಾಟಕವಾದ್ದರಿಂದ ಇತ್ತೀಚಿನ ನಾಟಕಗಳನ್ನು ಇಷ್ಟಪಡುವವರಿಗೆ ನೂರಕ್ಕೆ ನೂರರಷ್ಟು ಮನರಂಜನೆ ನೀಡಬಲ್ಲದು.
ನಾಲ್ಕು ದಶಕಗಳಿಂದಲೂ ಹಲವು ನಾಟಕಗಳನ್ನ ನಿರ್ದೇಶಿಸಿರುವ ವಿಜಯೀಂದ್ರ ಅರ್ಚಕ ಅವರು ಈ ನಾಟಕದಲ್ಲಿ ಒಂದು ಪಾತ್ರದಲ್ಲಿ ಕಾಣಿಸಿಕೊಳ್ಳುವುದರ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿರುತ್ತಾರೆ.
ತಮ್ಮ ರಂಗವೃತ್ತಿ ಜೀವನದುದ್ದಕ್ಕೂ ಸದಾ ಖಡಕ್ ಪಾತ್ರಗಳನ್ನೇ ಮಾಡುತ್ತಾ ಹೆಸಾರಾಗಿರುವ ಸಿ.ಎಸ್.ಪಾಟೀಲ ಕುಲಕರ್ಣಿಯವರು ಪ್ರಥಮ ಬಾರಿಗೆ ಕಡುಕಷ್ಟದ ಗಂಭೀರ ಪಾತ್ರಕ್ಕೆ ಬಣ್ಣ ಹಚ್ಚಿರುತ್ತಾರೆ.
ರಂಗಾಯಣ ಮತ್ತು ಇತರೆ ಸಂಸ್ಥೆಗಳಲ್ಲಿ ಕಲಾವಿದರಾಗಿ ದುಡಿದ ಪವನ್ ದೇಶಪಾಂಡೆ, ರಿತ್ವೀಕ್ ಹಿರೇಮಠ, ರತ್ನಾ ಅರ್ಚಕ ಅವರು ಕೂಡ ಪಾತ್ರಗಳಿಗೆ ಬಣ್ಣ ಹಚ್ಚಿರುತ್ತಾರೆ.
ಇನ್ನು ಖ್ಯಾತ ಸಂಗೀತ ನಿದೇರ್ಶಕರಾದ ಡಾ. ಶ್ರೀಧರ ಕುಲಕರ್ಣಿ ಅವರು ಈ ನಾಟಕಕ್ಕೆ ಮೂರು ಹಾಡು ಮತ್ತು ಹಿನ್ನಲೆ ಸಂಗೀತ ನೀಡಿರುತ್ತಾರೆ.
ಕಿಟ್ಟಿ ಗಾಂವಕರ ಅವರು ಬೆಳಕಿನ ವಿನ್ಯಾಸ, ಸಂತೋಷ ಮಹಾಲೆ ಪ್ರಸಾದನ, ಈರಪ್ಪ ನಾಯ್ಕರ ಫೋಟೋಗ್ರಫಿ ಮಾಡಿರುತ್ತಾರೆ.
ಹೀಗೆ ಅನುಭವಿಗಳ ದಂಡೇ ಈ ದ್ವಂದ್ವ ನಾಟಕವನ್ನು ನಿರ್ಮಾಣ ಮಾಡಿರುವುದರಿಂದ ಪ್ರೇಕಕರಲ್ಲಿ ಸಹಜ ಕುತೂಹಲ ಮೂಡಿದೆ.
ಇನ್ನು ಹುಬ್ಬಳ್ಳಿಯ ತನ್ವಿ ಆರ್ಟ ಹಬ್ ಸಂಸ್ಥೆಯು ಇಂದಿನ ಡಿಜಿಟಲ್ ಜಾಲತಾಣಗಳನ್ನು ಬಳಸಿಕೊಂಡು ವಿನೂತನ ಪೋಸ್ಟರ್ಗಳು, ವಿಡಿಯೋ ತುಣುಕುಗಳ ಮೂಲಕ ಸಮಗ್ರವಾಗಿ ಪ್ರಚಾರ ಕಾರ್ಯ ಮುಗಿಸಿದೆ.
ಧಾರವಾಡದಲ್ಲಿ ಹಲವು ನಾಟಕಗಳಿದ್ದರೂ ಮಾ.27 ರಂದು ಪ್ರೇಕ್ಷಕರ ಹದ್ದಿನ ಕಣ್ಣು ಮಾತ್ರ ಈ ’ದ್ವಂದ್ವ’ದ ಮೇಲಿದೆ.