ಧಾರವಾಡ prajakiran.com : ಸೆಪ್ಟೆಂಬರ್ ೦೭ ರಿಂದ ೧೯, ೨೦೨೦ ರ ವರೆಗೆ ದ್ವಿತೀಯ ಪಿ.ಯು.ಸಿ. ಪೂರಕ ಪರೀಕ್ಷೆಗಳು ಜಿಲ್ಲೆಯಾದ್ಯಂತ ನಡೆಯಲಿವೆ.
ಪರೀಕ್ಷಾ ಸಮಯವಾದ ಬೆಳಿಗ್ಗೆ ೧೦-೧೫ ರಿಂದ ಮಧ್ಯಾಹ್ನ ೧-೩೦ರ ವರೆಗೆ ಹಾಗೂ ಮಧ್ಯಾಹ್ನ ೨-೧೫ ರಿಂದ ಸಂಜೆ ೫-೩೦ ರ ವರೆಗೆ ಕುಂದಗೋಳ, ನವಲಗುಂದ ಮತ್ತು ಕಲಘಟಗಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ ೨೦೦ ಮೀಟರ್ ಪ್ರದೇಶದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಧ್ವನಿವರ್ಧಕಗಳ ನಿಷೇಧ ಹಾಗೂ ಸಮೀಪದ ಝೆರಾಕ್ಸ್ ಅಂಗಡಿಗಳು ಪರೀಕ್ಷಾ ಅವಧಿಯಲ್ಲಿ ಕಾರ್ಯನಿರ್ವಹಿಸದಂತೆ ನಿಷೇಧಿಸಿ, ಪರೀಕ್ಷಾ ಕೇಂದ್ರಗಳ ಸುತ್ತಲೂ ೨೦೦ ಮೀ. ಆವರಣವನ್ನು ಸಿ.ಆರ್.ಪಿ.ಸಿ. ೧೯೭೩ರ ಕಲಂ ೧೪೪ ರ ಮೇರೆಗೆ ನಿರ್ಬಂಧಿತ ಪ್ರದೇಶವೆಂದು ಘೋಷಿಸಿ, ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ ಆದೇಶ ಹೊರಡಿಸಿದ್ದಾರೆ.
ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಜಾಗೃತ ದಳ ರಚನೆ: ಸೆ.೦೭ ರಿಂದ ೧೯ ರ ವರೆಗೆ ಜಿಲ್ಲೆಯಲ್ಲಿ ನಡೆಯುವ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಳಲ್ಲಿ ನಡೆಯಬಹುದಾದ ಅವ್ಯವಹಾರಗಳನ್ನು ತಡೆಗಟ್ಟಲು ಹಾಗೂ ಪರೀಕ್ಷೆ ಸುಗಮವಾಗಿ ಹಾಗೂ ಸುವ್ಯವಸ್ಥಿತವಾಗಿ ಜರುಗಿಸಲು ಜಿಲ್ಲಾಮಟ್ಟದಲ್ಲಿ ಜಿಲ್ಲಾ ಮಟ್ಟದ ಜಾಗೃತ ದಳವನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹಾಗೂ ತಾಲೂಕಾ ಮಟ್ಟದಲ್ಲಿ ಜಾಗೃತ ದಳಗಳನ್ನು ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಲಾಗಿದೆ.
ಜಾಗೃತ ದಳದ ಸದಸ್ಯರು ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪೂರಕ ಪರೀಕ್ಷಾ ಕೇಂದ್ರಗಳಿಗೆ ಮೇಲಿಂದ ಮೇಲೆ ಅನಿರೀಕ್ಷಿತ ಭೇಟಿ ನೀಡಿ ಪರೀಕ್ಷಾ ಕೇಂದ್ರಗಳಲ್ಲಿ ಅವ್ಯವಹಾರಗಳು ನಡೆಯದಂತೆ ಸೂಕ್ತ ಕ್ರಮ ಜರುಗಿಸಲು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ನಿರ್ದೇಶನ ನೀಡಿದ್ದಾರೆ.
ವಿಶೇಷ ವೀಕ್ಷಕರ ನೇಮಕ: ಧಾರವಾಡ ಜಿಲ್ಲೆಯಲ್ಲಿ ಒಟ್ಟು ೧೩ ಪದವಿ ಪೂರ್ವ ಪೂರಕ ಪರೀಕ್ಷಾ ಕೇಂದ್ರಗಳಿವೆ.
ಜಿಲ್ಲೆಯಾದ್ಯಂತ ಸೆ. ೦೭ ರಿಂದ ೧೯, ೨೦೨೦ ರ ವರೆಗೆ ಬೆಳಿಗ್ಗೆ ೧೦-೧೫ ರಿಂದ ಮಧ್ಯಾಹ್ನ ೧-೩೦ ರ ವರೆಗೆ ಹಾಗೂ ಮಧ್ಯಾಹ್ನ ೨-೧೫ ರಿಂದ ಸಂಜೆ ೫-೩೦ ರ ವರೆಗೆ ಪೂರಕ ಪರೀಕ್ಷೆಗಳು ಜರುಗಲಿವೆ.
ಈ ೧೩ ಪರೀಕ್ಷಾ ಕೇಂದ್ರಗಳಿಗೆ ಗೆಜೆಟೆಡ್ ಅಧಿಕಾರಿಗಳನ್ನು ವಿಶೇಷ ವೀಕ್ಷಕರೆಂದು (ಸಿಟ್ಟಿಂಗ್ ಸ್ಕಾ÷್ವಡ್) ನೇಮಕ ಮಾಡಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು ಆದೇಶ ಹೊರಡಿಸಿದ್ದಾರೆ.