ನವದೆಹಲಿ prajakiran.com : ಭಾರತೀಯ ಸೇನೆಯ ಅತ್ಯುನ್ನತ ಹುದ್ದೆಯಾಗಿರುವ ಲೇಫ್ಟಿನಂಟ್ ಜನರಲ್ ಆಗಿ ಬಡ್ತಿ ಪಡೆದ ಡಾ. ಮಾಧುರಿ ಕಾನಿಟ್ಕರ್ ಧಾರವಾಡದವರು ಎನ್ನುವುದು ಬೆಳಕಿಗೆ ಬಂದಿದೆ.
ಈ ಸಂತಸದ ಸಂಗತಿ ಕೇವಲ ಧಾರವಾಡ ಜಿಲ್ಲೆಗೆ ಮಾತ್ರವಲ್ಲ ಇಡೀ ಕರ್ನಾಟಕಕ್ಕೆ ಹೆಮ್ಮೆಯ ವಿಷಯವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸಾಕಷ್ಟು ಮಾಹಿತಿ ಹರಿದಾಡುತಿದ್ದು, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಸಹ ಈ ವಿಷಯವನ್ನು ಟ್ವಿಟ್ ಮಾಡಿದ್ದಾರೆ.
ಇದಕ್ಕೆ ಡಾ. ಮಾಧುರಿ ಅವರು ಧನ್ಯವಾದದ ರೀ ಟ್ವಿಟ್ ಮಾಡುವ ಮೂಲಕ ತಮ್ಮ ಮೂಲ ಧಾರವಾಡ ಎಂಬುದನ್ನು ಅವರು ಖಚಿತಪಡಿಸಿದ್ದಾರೆ.
ಅವರು ಈ ಹಿಂದೆ ತಮ್ಮ ಬಾಲ್ಯವನ್ನು ಧಾರವಾಡದ ದರೋಗಾ ಓಣಿಯಲ್ಲಿ ಕಳೇದಿದ್ದರು. ೧೯೬೧ ರಲ್ಲಿ ಮಾಧುರಿ ಅವರು ಧಾರವಾಡದಲ್ಲಿ ಹುಟ್ಟಿದ್ರು ಎಂದು ತಿಳಿದು ಬಂದಿದೆ.
ಸರಳಾದೇವಿ ಖೋತ್ ಎಂಬ ವೈದ್ಯರ ಮೊಮ್ಮಗಳು ಆಗಿರುವ ಡಾ. ಮಾಧುರಿ, ವೃತ್ತಿಯಲ್ಲಿ ಶಿಶು ವೈದ್ಯೆ. ಗೋಪಾಲರಾವ್ ಖೋತ ಹಾಗೂ ಹೇಮಲತಾ ಖೋತ ದಂಪತಿಯ ಮಗಳಾದ ಮಾಧುರಿ ಕುಟುಂಬ ಕಳೆದ ೪೦ ವರ್ಷಗಳ ಹಿಂದೆಯೇ ಧಾರವಾಡದಿಂದ ಪುಣೆಗೆ ಸ್ಥಳಾಂತರಗೊಂಡಿದ್ದರು.
ಹೀಗಾಗಿ ಡಾ.ಮಾಧುರಿ ಅವರ ಎಲ್ಲ ಶಿಕ್ಷಣ ಪುಣೆಯಲ್ಲೇ ಆಗಿದೆ. ಅದಾದ ನಂತರ ಮಾಧುರಿ ಆರ್ಮಿ ಕಾಲೇಜ್ ಆಫ್ ಮೆಡಿಕಲ್ ಸೈನ್ಸನಲ್ಲಿ ಪ್ರೋಪೆಸರ್ ಆಗಿದ್ರು.
ಅದಾದ ನಂತರ ಆರ್ಮಿಯಲ್ಲಿ ವೈದ್ಯಾಧಿಕಾರಿ ಆಗ್ತಾರೆ. ಹಾಗೆಯೇ ಭಾರತಿಯ ಸೇನೆಯ ವೈದ್ಯಕೀಯ ವಿಭಾಗದಲ್ಲಿ ವಿವಿಧ ಹುದ್ದೆ ಅಲಂಕರಿಸಿ ಈಗ ಲೆಫ್ಟಿನೆಂಟ್ ಜನರಲ್ ಹುದ್ದೆಗೆ ಬಂದಿದ್ದಾರೆ.
ಇನ್ನು ಈ ಉನ್ನತ ಹುದ್ದೆಗೆ ಏರಿದ ದೇಶದ ಮೂರನೇ ಮಹಿಳೆ ಎಂಬ ಹೆಗ್ಗಳಿಕೆಯೂ ಈ ಧಾರವಾಡದ ಸುಪುತ್ರಿಗಿದೆ.