9 ನೇ ದಿನ ಪೂರೈಸಿದ ಕೊರವರ ಆಮರಣ ಉಪವಾಸ,
358 ನೌಕರರ ಸರದಿ ಸತ್ಯಾಗ್ರಹ
ಧಾರವಾಡ ಪ್ರಜಾಕಿರಣ.ಕಾಮ್ : ಕಳೆದ 9 ದಿನಗಳಿಂದ ಧಾರವಾಡ ಮಹಾನಗರ ಪಾಲಿಕೆ ಆವರಣದಲ್ಲಿ ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ನಡೆಸುತ್ತಿರುವ ಆಮರಣ ಉಪವಾಸ ಹಾಗೂ
358 ನೌಕರರು ನಡೆಸುತ್ತಿರುವ ಸರದಿ ಉಪವಾಸ ಮಂಗಳವಾರ 9 ನೇ ದಿನ ಪೂರೈಸಿದೆ.
7 ತಿಂಗಳ ಸಂಬಳ ಬಿಡುಗಡೆ ಹಾಗೂ 358 ನೀರು ಸರಬರಾಜು ನೌಕರ ಮರುನೇಮಕ ಆಗುವರೆಗೆ
ಹೋರಾಟ ಕೈ ಬಿಡದಿರಲು ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಪಟ್ಟು ಹಿಡಿದಿರುವುದರಿಂದ ಹೋರಾಟ ತೀವ್ರ ಸ್ವರೂಪ ಪಡೆದಿದೆ.
ಈ ಹಿನ್ನೆಲೆಯಲ್ಲಿ ಇಂದು ಮಹಿಳಾ ನೌಕರರು ತಮ್ಮ ರಕ್ತದ ಮೂಲಕ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಪತ್ರ ಬರೆದು ಗಮನ ಸೆಳೆದರು.
ಪತ್ರದ ವಿವರ : ಅವಳಿನಗರದ ಜನತೆಗೆ ಕಳೆದ 15-20 ವರ್ಷಗಳಿಂದ ಜಲಮಂಡಳಿಯ ನೀರು ಸರಬರಾಜು ನಿರ್ವಹಣಾ ವ್ಯವಸ್ಥೆಯಲ್ಲಿ ಕೆಲಸ ಮಾಡಿದ ನೌಕರರನ್ನು ಎಲ್ ಆಂಡ್ ಟಿ ಕಂಪನಿಗೆ ಹಸ್ತಾಂತರಿಸಲಾಗಿದೆ.
ಅವರು 7 ತಿಂಗಳು ದುಡಿಸಿಕೊಂಡು ಕೊನೆಗೆ ಸಂಬಳವೂ ನೀಡದೆ 358 ನೌಕರರ ಮರು ನೇಮಕವೂ ಮಾಡದೆ 358 ಬಡ ಮಕ್ಕಳನ್ನು ಬೀದಿಗೆ ತಂದು ನಿಲ್ಲಿಸಿ ಅನ್ಯಾಯ ಎಸಗಿದ್ದಾರೆ.
ಇಷ್ಟೆಲ್ಲಾ ಹೋರಾಟ ನಡೆಯುತ್ತಿದ್ದರೂ ಅವರು ಸಕಾರಾತ್ಮಕವಾಗಿ ಸ್ಪಂದಿಸುವ ಲಕ್ಷಣಗಳು ಕಾಣುತ್ತಿಲ್ಲ.
ಹೀಗಾಗಿ ತಾವು ನಮ್ಮ ರಕ್ತ ಕಣ್ಣೀರು ಒರೆಸುವ ಕೆಲಸ ಮಾಡಬೇಕು ಕುಸಮಾ ಮೂಸಿಗೇರಿ, ಶೃತಿ ಪವಾರ, ವೀಣಾ ಬಡಿಗೇರ, ಅಶ್ವಿನಿ ದೇಸಾಯಿ, ಫರಾ, ಸರೋಜಾ ನಿಂಬಕ್ಕನವರ, ಮಂಜುಳಾ ದೇವಡಕರ, ಬಸಮ್ಮ ರತ್ನನವರ, ಗಾಯತ್ತಿ ಕಮ್ಮಾರ, ಯಶೋಧಾ ಪವಾರ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಜನಜಾಗೃತಿ ಸಂಘದ ಉಪಾಧ್ಯಕ್ಷ ನಾಗರಾಜ ಕಿರಣಗಿ ಹಾಗೂ ನೀರು ಸರಬರಾಜು ನೌಕರರ ಸಂಘದ ನೂರಾರು ಸದಸ್ಯರು ಭಜನೆ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಒಂಬತ್ತನೇ ದಿನ ಹೋರಾಟಕ್ಕೆ ಬೆಂಬಲಿಸಿ ಹುಡಾ ಮಾಜಿ ಅಧ್ಯಕ್ಷ ದಾನಪ್ಪ ಕಬ್ಬೇರ, ರವಿ ಮಾಳಗೇರ, ಸೂರಜ್ ಪುಡಕಲಕಟ್ಟಿ, ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದ್ದರು.