7 ತಿಂಗಳ ಅವಧಿಯಲ್ಲಿ ಒಂದು ಗುಂಟೆ ಒತ್ತುವರಿ ತೆರವು ಮಾಡಿದ್ದರೆ ತೋರಿಸಿ
ಮೈಸೂರು prajakiran.com : ನೀವು ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಆಗಿದ್ದೀರಿ.
7 ತಿಂಗಳ ಅವಧಿಯಲ್ಲಿ ಒಂದೇ ಒಂದು ಗುಂಟೆ ಒತ್ತುವರಿ ತೆರವು ಮಾಡಿದ್ದರೆ ತೋರಿಸಿ ಎಂದು ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಮಾಜಿ ಸಚಿವ ಸಾ.ರಾ.ಮಹೇಶ್ ಕಿಡಿಕಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಲೂ ನೀವು ಐಎಎಸ್ ಅಧಿಕಾರಿಯೇ ಆಗಿದ್ದೀರಿ, ಕರ್ನಾಟಕದಲ್ಲೇ ಇದ್ದೀರಿ.
ಸರ್ಕಾರಿ ಭೂಮಿ ಉಳಿಸಿದ್ದರೆ ಮುಖ್ಯಮಂತ್ರಿಗೆ ವರದಿ ಸಲ್ಲಿಸಿ ಅಥವಾ ಫೇಸ್ಬುಕ್ ಅಕೌಂಟ್ನಲ್ಲಿ ದಾಖಲೆ ಬಹಿರಂಗಪಡಿಸಿ ಎಂದರು.
ನಾನು 10 ಆರೋಪಗಳನ್ನು ಸಾಕ್ಷಿ ಸಮೇತ ಮಾಡಿದ್ದೇನೆ. ಯಾವಾಗ ಆಂಧ್ರದ ಲಾಭಿ ಮಾಡಿ ಕರ್ನಾಟಕದ ಅಧಿಕಾರಿ(ಬಿ.ಶರತ್) ಎತ್ತಂಗಡಿ ಮಾಡಿದ್ದೀರೋ ಅಂದಿನ ದಿನದಿಂದಲೂ ನಿಮ್ಮ ವಿರುದ್ಧ ಆರೋಪ ಮಾಡುತ್ತ ಬಂದಿದ್ದೇನೆ.
ಅಂದಿನಿಂದಲೇ ನೀವು ಸರ್ಕಾರಿ ಭೂಮಿ ಉಳಿಸುವ ಪ್ರಯತ್ನ ಮಾಡಬಹುದಿತ್ತು ಅಲ್ವಾ? ಎಂದು ಪ್ರಶ್ನಿಸಿದರು.
ಮೈಸೂರಿನಲ್ಲಿ ಜನರಿಗೆ ಕುಡಿಯಲು ನೀರಿಲ್ಲ. ಇವರಿಗೆ ಸ್ವಿಮ್ಮಿಂಗ್ ಮಾಡೊಕೆ ಕುಡಿಯೋ ನೀರು ಬೇಕು. ಇವರಿಗಿಂತ ಮುಂಚೆ ಇದ್ದ ಜಿಲ್ಲಾಧಿಕಾರಿಗಳ ಮನೆಯ ಕೆಇಬಿ ಬಿಲ್ ನೋಡಿ. ಕೇವಲ 4 ಅಥವಾ 5 ಸಾವಿರ ಕರೆಂಟ್ ಬಿಲ್ ಬಂದಿದೆ.
ರೋಹಿಣಿ ಸಿಂಧೂರಿ ಉಪಯೋಗಿಸಿರುವ ಕೆಇಬಿ ಬಿಲ್ ನೋಡಿ. ಜಿಲ್ಲಾಧಿಕಾರಿ ಮನೆಯಲ್ಲಿ ಮೂರು ಕೆಇಬಿ ಮೀಟರ್ ಇವೆ.
ಒಂದೊಂದು ತಿಂಗಳಲ್ಲಿ 50ಸಾವಿರ ಕರೆಂಟ್ ಬಿಲ್ ಬಂದಿದೆ. ಯಾವ ಮಂತ್ರಿ ಮನೆಯಲ್ಲೂ ಇಷ್ಟು ದೊಡ್ಡ ಮೊತ್ತದ ಕರೆಂಟ್ ಬಿಲ್ ಬಂದಿಲ್ಲ. ಇಂತವರಿಂದ ಕರ್ನಾಟಕ ಉಳಿಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.