ಬೆಂಗಳೂರು prajakiran.com : ಡ್ರಗ್ಸ್ ಜಾಲದ ನಂಟು ಹೊಂದಿರುವ ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿ ಸೇರಿ ಐವರು ಆರೋಪಿಗಳಿಗೆ ಹದಿನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನ ಒಪ್ಪಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಬೆಂಗಳೂರಿನ ಒಂದನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರು ಸಿಸಿಬಿ ಹಾಗೂ ಅರ್ಜಿದಾರರ ವಾದ-ಪ್ರತಿವಾದ ಆಲಿಸಿದ ಬಳಿಕ ಈ ಮಹತ್ವದ ಆದೇಶ ಹೊರಡಿಸಿದ್ದಾರೆ.
ಇದೇ ವೇಳೆ ತಮಗೆ ಬೆನ್ನು ನೋವಿದೆ. ಅಸ್ತಮಾವಿದೆ. ಹೀಗಾಗಿ ತನಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಎಂದು ನಟಿ ರಾಗಿಣಿ ನ್ಯಾಯಾಲಯಕ್ಕೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು ಜೈಲಿನಲ್ಲಿರುವ ಆಸ್ಪತ್ರೆಯಲ್ಲಿಯೇ ಪರೀಕ್ಷಿಸಿಕೊಳ್ಳಿ ಎಂದು ಸೂಚನೆ ನೀಡಿದ್ದಾರೆ.
ಹೀಗಾಗಿ ಈಗಾಗಲೇ ಹನ್ನೊಂದು ದಿನಗಳ ಕಾಲ ಸಿಸಿಬಿ ವಿಚಾರಣೆ ನಡೆಸಿದ ಬಳಿಕ ನಟಿ ರಾಗಿಣಿ ದ್ವಿವೇದಿಗೆ ಈಗ ಸೆ. 27ರವರೆಗೆ ನ್ಯಾಯಾಂಗ ಬಂಧನ ಒಪ್ಪಿಸಲಾಗಿದೆ.
ಎ 2 ಆರೋಪಿ ನಟಿ ರಾಗಿಣಿ ದ್ವಿವೇದಿ ಜೊತೆಗೆ ನಂಟು ಹೊಂದಿದ ಎ 4- ಪ್ರಶಾಂತ್ ರಂಕಾ, ಎ 7 – ಲೂಮ್ ಪೆಪ್ಪರ್, ಎ 11- ರಾಹುಲ್ ತೋನ್ಸೆ ಎ 13- ನಿಯಾಜ್ ಗೆ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಇದರಿಂದಾಗಿ ನಟಿ ರಾಗಿಣಿ ಸೇರಿ ಒಟ್ಟು ಐವರು ಆರೋಪಿಗಳಿಗೆ ಈಗ ಬೆಂಗಳೂರಿನ ಕೇಂದ್ರ ಕಾರಾಗೃಹವೇ (ಪರಪ್ಪನ ಅಗ್ರಹಾರ) ಗತಿ ಎನ್ನುವಂತೆ ಆಗಿದೆ.
ನಟಿ ರಾಗಿಣಿಗೆ ಕೋವಿಡ್ ಟೆಸ್ಟ್ ಮಾಡಿಸಲಾಗಿದ್ದು, ವರದಿ ನೆಗೆಟಿವ್ ಬಂದಿದೆ. ಆದರೂ ಮುಂಜಾಗ್ರತ ಕ್ರಮವಾಗಿ ಆಕೆಯನ್ನು ಕೋವಿಡ್ ಸೆಲ್ ನಲ್ಲಿ ಕ್ವಾರಂಟಿನ್ ಮಾಡಲಾಗುತ್ತದೆ.
ಕರೋನಾ ಬಂದಾಗಿನಿಂದ ಮುಂಜಾಗ್ರತ ಕ್ರಮವಾಗಿ ಜೈಲಿನಲ್ಲಿ ಹೊಸದಾಗಿ ಕೋವಿಡ್ ಸೆಲ್ ಮಾಡಲಾಗಿದೆ. ಕ್ವಾರಂಟಿನ್ ಅವಧಿ ಮುಗಿದ ಬಳಿಕ ಮಹಿಳಾ ಸಾಮಾನ್ಯ ಕೊಠಡಿಗೆ ಶಿಫ್ಟ್ ಮಾಡಲಾಗುತ್ತದೆ.
ಎ 2 ಆರೋಪಿ ನಟಿ ರಾಗಿಣಿ ಇದೀಗ ಸಾಮಾನ್ಯ ವಿಚಾರಣಾ ಖೈದಿಯಾಗಿ ಪರಪ್ಪನ ಕೇಂದ್ರ ಕಾರಾಗೃಹ ಜೈಲಿಗೆ ಸ್ಥಳಾಂತರಗೊಳ್ಳಲಿದ್ದಾರೆ.
ನ್ಯಾಯಾಲಯದ ಆದೇಶದ ಪ್ರತಿ ಬರುತ್ತಿದ್ದಂತೆ ಸಿಸಿಬಿ ಪೊಲೀಸರು ಆರೋಪಿಗಳನ್ನು ಸ್ಥಳಾಂತರ ಮಾಡಲಿದ್ದಾರೆ.
ಇದೇ ವೇಳೆ ನಟಿ ರಾಗಿಣಿ ದ್ವಿವೇದಿಯ ಜಾಮೀನು ಅರ್ಜಿ ವಿಚಾರಣೆಯನ್ನು ಸೆ. 16ಕ್ಕೆ ನ್ಯಾಯಾಲಯ ಮುಂದೂಡಿದೆ.