ಧಾರವಾಡ prajakiran.com : ಧಾರವಾಡದಲ್ಲಿ ಕೂಡ ಸಾಕಷ್ಟು ಪ್ರಮಾಣದ ಅಕ್ರಮ ಗಾಂಜಾ ಘಾಟು ಕೇಳಿ ಬರುತ್ತಿದ್ದು, ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿತರನ್ನು ಬಂಧಿಸುವಲ್ಲಿ ಧಾರವಾಡ ಉಪನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಾರಾಯಣಪೂರ ಎಲ್.ಐ.ಸಿ ಕ್ವಾಟರ್ಸ ಚಿಕ್ಕಮಕ್ಕಳ ಗಾರ್ಡನ್ ಹತ್ತಿರದ ರಸ್ತೆಯ ಮೇಲೆ ಸೆ. ೧೧ ರಂದು ಯಾರೋ ಎರಡು ವಾಹನಗಳಲ್ಲಿ ಯಾವುದೋ ಮಾದಕ ವಸ್ತು ಮಾರಾಟ ಮಾಡುವ ಉದ್ದೇಶದಿಂದ ನಿಂತುಕೊಂಡಿದ್ದಾಗಿ ತಿಳಿದು ಬಂದಿದೆ.
ಖಚಿತ ಮಾಹಿತಿ ದೊರೆಯುತ್ತಿದ್ದಂತೆ ಪೊಲೀಸರು ಸರಕಾರ ತರ್ಪಿ ದೂರು ದಾಖಲಿಸಿಕೊಂಡು ಪೊಲೀಸ್ ಆಯುಕ್ತ ಆರ್. ದಿಲೀಪ್, ಡಿಸಿಪಿಗಳಾದ ಕೃಷ್ಣಕಾಂತ. ಪಿ., ಆರ್. ಬಿ. ಬಸರಗಿ, ಧಾರವಾಡ ಶಹರ ಉಪ-ವಿಭಾಗದ ಎಸಿಪಿ ಅನುಷಾ ಜಿ. ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸಪೆಕ್ಟರ್ ಪ್ರಮೋದ ಯಲಿಗಾರ, ಪಿ ಎಸ್ ಐ ಎಸ್. ಎಂ. ಹುಣಸಿಕಟ್ಟಿ ಹಾಗೂ ಉಪನಗರ ಪೊಲೀಸ್ ಠಾಣೆಯ ಸಿಬ್ಬಂದಿ ಪ್ರಕರಣವನ್ನು ಭೇದಿಸಿದ್ದಾರೆ.
ಧಾರವಾಡದ ನಾರಾಯಣಪೂರ ನಿವಾಸಿಗಳಾದ ಸಮೀವುಲ್ಲಾ ತಂದೆ ಅಲ್ಲಾಭಕ್ಷ ಹುಬ್ಬಳ್ಳಿ (22), ಝಡ್ಸನ್ ತಂದೆ ಲೂಯಿಸ್ ಮಿರಜಕರ್(25), ಧಾರವಾಡದ ಗರಗ ನಿವಾಸಿ ಮಂಜುನಾಥ ತಂದೆ ಶಿವಾನಂದ ಜಂತ್ಲಿ (23), ಧಾರವಾಡದ ದಾನೇಶ್ವರಿ ನಗರ ನಿವಾಸಿ ಸಂಗಮೇಶ ತಂದೆ ಅಂದಾನಪ್ಪ ಅಂಗಡಿ (23) ಬಂಧಿತ ಆರೋಪಿಗಳು
ಸದರಿ ಆರೋಪಿತರಿಗೆ ದಸ್ತಗೀರ ಮಾಡಿ ಆರೋಪಿತರಿಂದ ಅಂದಾಜು ೨೦ ಸಾವಿರ ಮೌಲ್ಯದ ಒಟ್ಟು ೧೦೭೪ ಗ್ರಾಂ. ತೂಕದ ಗಾಂಜಾ ವಸ್ತು, ೪ ಮೊಬೈಲ್ ಫೋನಗಳು ಹಾಗೂ ಎರಡು ದ್ವಿಚಕ್ರ ವಾಹನಗಳು ಮತ್ತು ಒಟ್ಟು ೪೩೦/- ರೂ. ನಗದು ಹಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಈ ಕುರಿತು ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆದಿದೆ.
ಪೊಲೀಸರ ಕಾರ್ಯಾಚರಣೆಗೆ ಪೊಲೀಸ್ ಆಯುಕ್ತರು ಹುಬ್ಬಳ್ಳಿ- ಧಾರವಾಡ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.