ಕಲಘಟಗಿ prajakiran.com : 75ನೇ ಸ್ವಾತಂತ್ರೋತ್ಸವ ಹಿನ್ನಲೆಯಲ್ಲಿ ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದಲ್ಲಿ ಮಾಜಿ ಸಚಿವ ಸಂತೋಷ ಲಾಡ್ ಕರೋನಾ ನಿಯಮಾವಳಿಗಳನ್ನು ಗಾಳಿಗೆ ತೂರಿ ಬೃಹತ್ ಮೆರವಣಿಗೆ ನಡೆಸಿದ್ದಾರೆ.
ಅಜಾದಿಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಸಡಗರ ಸಂಭ್ರಮಮಿದ್ದರೂ ರಾಜ್ಯ ಹಾಗೂ ದೇಶದಲ್ಲಿ ಸರಳ ಆಚರಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ.
ಜನರಿಗೆ ತಿಳುವಳಿಕೆ ನೀಡಿ ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂದು ಹೇಳಬೇಕಾದ ಮಾಜಿ ಸಚಿವರೆ ಸಾವಿರಾರು ಜನರನ್ನು ಒಂದಡೆ ಶಕ್ತಿ ಪ್ರದರ್ಶನ ನಡೆಸಿದ್ದು ಸರಿನಾ ಎಂಬ ಪ್ರಶ್ನೆ ಎದುರಾಗಿದೆ.
ಒಂಬತ್ತು ಅಡಿ ಅಗಲ ಎರಡು ಕಿಲೋ ಮೀಟರ್ ಉದ್ದದ ಬೃಹತ್ ತ್ರಿವರ್ಣ ಧ್ವಜ ಮೆರವಣಿಗೆ ವೇಳೆ ಹತ್ತು ಸಾವಿರಕ್ಕೂ ಅಧಿಕ ಜನರನ್ನು ಸೇರಿಸಿದ್ದಲ್ಲದೆ, ಮಾಸ್ಕ್ ಇಲ್ಲ, ಸಾಮಾಜಿಕ ಅಂತರವಿಲ್ಲದಿರುವುದು ಸ್ವಷ್ಟವಾಗಿ ಕೊರೊನಾ ನಿಯಮಗಳ ಉಲ್ಲಂಘನೆಯಾಗಿದೆ.
ಬೃಹತ್ ಮೆರವಣಿಗೆಯಲ್ಲಿ ಡಿಜೆ ಹಾಡಿಗೆ ಯುವಕರು ಹುಚ್ಚೆದ್ದು ಕುಣಿದು ಕುಪ್ಪಳಿಸಿದ್ದು ಕಂಡು ಬಂದಿದೆ.
ಇಷ್ಟೆಲ್ಲಾ ಆದರೂ ಜಿಲ್ಲೆಯ ಪೊಲೀಸ್ ಇಲಾಖೆ ಹಾಗೂ ಧಾರವಾಡ ಜಿಲ್ಲಾಡಳಿತ ಕಣ್ಣು ಮುಚ್ಚಿ ಕುಳಿತಿರುವುದು ಕಾನೂನು ಇರುವುದು ಕೇವಲಜನರಿಗೆ ಮಾತ್ರನಾ ಎಂಬ ಪ್ರಶ್ನೆ ಕೇಳಿಬಂದಿದೆ.
ಈಗಲಾದರೂ ಪೊಲೀಸರು ಇಲ್ಲವೇ ಜಿಲ್ಲಾಡಳಿತ ಯಾವ ಕ್ರಮ ಜರುಗಿಸುತ್ತದೆ ಎಂಬುದನ್ನು ಕಾದು ನೋಡಬೇಕು.