ನವದೆಹಲಿ prajakiran.com :
ದೇಶದ ವಿವಿಧ ರಾಜ್ಯಗಳಲ್ಲಿ ಕೋರೋನಾದಿಂದ ಅನಾಥರಾದ ಮಕ್ಕಳ ವರದಿಯನ್ನು ಸುಪ್ರೀಂಕೋರ್ಟ್ಗೆ ಸಲ್ಲಿಸಲಾಗಿದೆ.
ಸುಪ್ರೀಂಕೋರ್ಟ್ನ ನ್ಯಾಯಮೂರ್ತಿ ಎಲ್.ನಾಗೇಶ್ವರ ರಾವ್ ಮತ್ತು ಅನಿರುದ್ಧ ಬೋಸ್ ಅವರುಗಳಿದ್ದ ಪೀಠಕ್ಕೆ ಈ ಮಾಹಿತಿ ಸಲ್ಲಿಸಲಾಗಿದೆ.
ಇಡೀ ದೇಶದಲ್ಲಿ ಈವರೆಗೆ 1,742 ಮಕ್ಕಳು ತಂದೆ ಮತ್ತು ತಾಯಂದಿರನ್ನು ಕಳೆದುಕೊಂಡಿದ್ದಾರೆ. 7,464 ಮಕ್ಕಳು ತಂದೆ ಅಥವಾ ತಾಯಿ, ಅಂದರೆ ಇಬ್ಬರ ಪೈಕಿ ಒಬ್ವ ಪಾಲಕರನ್ನು ಕಳೆದುಕೊಂಡಿದ್ದಾರೆ.
140 ಮಕ್ಕಳು ನಿರ್ಗತಿಕರಾಗಿದ್ದಾರೆ. ಈ ಮೂಲಕ ಒಟ್ಟು 9,346 ಮಕ್ಕಳು ಅನಾಥರಾಗಿದ್ದಾರೆ ಎಂಬ ಅತ್ಯಂತ ಆಘಾತಕಾರಿ ಮಾಹಿತಿಯನ್ನು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸುಪ್ರೀಂಕೋರ್ಟ್ಗೆ ತಿಳಿಸಿದೆ.
ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು, ಅಂದರೆ ಒಟ್ಟು 318 ಮಕ್ಕಳು ತಮ್ಮ ತಂದೆ ಮತ್ತು ತಾಯಂದಿರಿಬ್ಬರನ್ನೂ ಕಳೆದುಕೊಂಡು ಅನಾಥರಾಗಿದ್ದಾರೆ.
ಅದೇರೀತಿ ಉತ್ತರ ಪ್ರದೇಶದಲ್ಲಿ ಓರ್ವ ಪಾಲಕರನ್ನು ಕಳೆದುಕೊಂಡ ಮಕ್ಕಳ ಸಂಖ್ಯೆ ಹೆಚ್ಚಿದ್ದು, 1830 ಮಕ್ಕಳು ತಂದೆ ಅಥವಾ ತಾಯಿಯನ್ನು ಕಳೆದುಕೊಂಡಿದ್ದಾರೆ.
ಅತಿ ಹೆಚ್ಚು ಮಕ್ಕಳು ಅನಾಥರಾದ ರಾಜ್ಯಗಳ ಪೈಕಿ ಉತ್ತರ ಪ್ರದೇಶವೇ
ಮೊದಲ ಸ್ಥಾನದಲ್ಲಿದ್ದು, ಈವರೆಗೆ 2110 ಮಕ್ಕಳು ಅನಾಥರಾಗಿದ್ದಾರೆ.
ಅಂದಹಾಗೆ ಕರ್ನಾಟಕದಲ್ಲಿ ಕೋರೋನಾದಿಂದ 21 ಮಕ್ಕಳು ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡಿದ್ದಾರೆ. 15 ಮಕ್ಕಳು ತಂದೆ ಅಥವಾ ತಾಯಿಯನ್ನು ಕಳೆದುಕೊಂಡಿದ್ದಾರೆ.
ಒಟ್ಟು 36 ಮಕ್ಕಳು ತಮ್ಮ ಪಾಲಕರನ್ನು ಕಳೆದುಕೊಂಡಿದ್ದಾರೆ ಎಂದು ಈ ವರದಿಯಲ್ಲಿ ತಿಳಿಸಲಾಗಿದೆ.
ಕೋರೋನಾ 3ನೇ ಅಲೆ ಮಕ್ಕಳಿಗೆ ಅಪಾಯಕಾರಿ ಎಂಬ ವರದಿಯ ನಡುವೆಯೇ ಈಗಾಗಲೇ ತಮ್ಮ ತಂದೆ ತಾಯಂದಿರನ್ನು ಕಳೆದುಕೊಂಡು ಅನಾಥರಾದ ಮಕ್ಕಳ ಸಂಖ್ಯೆ ಬಹಿರಂಗಗೊಂಡಿದೆ.
ಅಮಿಕಸ್ ಕ್ಯೂರಿ ಅವರೊಂದಿಗೆ ಅನಾಥ ಮಕ್ಕಳ ಪಾಲನೆಯ ಕುರಿತು ಚರ್ಚೆ ನಡೆಸಲು ನೋಡಲ್ ಅಧಿಕಾರಿಗಳನ್ನು ನೇಮಿಸಲು ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ಸೂಚಿಸಿದೆ.