ಧಾರವಾಡ Prajakiran.com : ರೈತರ ಕಲೆ ಬಿಂಬಿಸುವ ಟಗರಿನ ಕಾಳಗ ನಿಷೇಧ ಮಾಡಿರುವುದನ್ನು ಖಂಡಿಸಿ ಧಾರವಾಡ ಜಿಲ್ಲೆಯ ಟಗರಿನ ಕಾಳಗ ಸಮಿತಿ ಹಾಗೂ ಶ್ರೀ ರಾಮ್ ಸೇನೆ ವತಿಯಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಮೋದ್ ಮುತ್ತಾಲಿಕ್, ಗೋ ಹತ್ಯೆ, ಕುದುರೆ ರೇಸ್ ಸೇರಿದಂತೆ ವಿವಿಧ ಹಿಂಸಾತ್ಮಕ ಕೃತ್ಯ ಬಿಟ್ಟು ರೈತರ ಗ್ರಾಮೀಣ ಕ್ರೀಡೆಗಳ ನಿಷೇಧ ಹೇರಲಾಗಿದೆ ಇದು ಸರಿಯಲ್ಲ.
ಕೂಡಲೇ ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಪಂದಿಸಬೇಕು.
ಇಲ್ಲವಾದರೆ ಮುಂದಿನ ದಿನಗಳಲ್ಲಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಒಳಗಡೆ ಟಗರುಗಳನ್ನು ತಂದು ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಲಾಡಳಿತ ಹಾಗೂ ಸರ್ಕಾರವನ್ನು ಎಚ್ಚರಿಸಿದರು.
ಸರ್ಕಾರ ಕೊವಿಡ್ ನೆಪದಲ್ಲಿ ಅನಾವಶ್ಯಕ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಎಲ್ಲದಕ್ಕೂ ಅನುಮತಿ ನೀಡಿ ಟಗರಿನ ಕಾಳಗಕ್ಕೆ ನಿಷೇಧ ಹೇರಲಾಗಿದೆ.
ಕೂಡಲೇ ನಿಷೇಧ ವಾಪಸ್ ಪಡೆಯಲು ಶ್ರೀ ರಾಮ ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಧಾರವಾಡ ವಿಭಾಗದ ಸಂಚಾಲಕ ರಾಜು ಖಾನಪ್ಪನವರ, ಧಾರವಾಡ ಜಿಲ್ಲಾ ಸಂಚಾಲಕ ಮಂಜುನಾಥ ಕಾಟಕರ್, ಧಾರವಾಡ ಪ್ರಮುಖ ಅಣ್ಣಪ್ಪ ದಿವಟಗಿ, ಧಾರವಾಡ ಗ್ರಾಮೀಣ ಸಂಚಾಲಕ ಸುರೇಶ್ ಶಿಂದೆ, ಧಾರವಾಡ ಗ್ರಾಮೀಣ ಪ್ರಮುಖ ಮೈಲಾರ ಗುಡ್ಡಪ್ಪನವರ, ಗೋಪಾಲ ಜಾಧವ್, ರಾಮದಾಸ್ ದವಳಿ ಸೇರಿದಂತೆ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.