ಧಾರವಾಡ prajakiran.com : ರಾಜ್ಯ ಸರಕಾರದ ನಡೆಯನ್ನು ನೋಡುತ್ತಿದ್ದರೆ ಖಾಸಗಿ ಶಾಲೆಗಳು ಮತ್ತು ಸರಕಾರಿ ಶಾಲೆಗಳು ಬೇರೆ ಬೇರೆಯಾಗಿಯೇ ನೋಡುತ್ತಿರುವುದು ಖೇದಕರ ಸಂಗತಿಯಾಗಿದೆ ಎಂದು ಧಾರವಾಡ ಅನುದಾನರಹಿತ ಖಾಸಗಿ ಶಾಲೆಗಳ ಅಭಿವೃದ್ಧಿ ಸಂಸ್ಥೆ ಹಾಗೂ ಧಾರವಾಡ ಜಿಲ್ಲಾ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘ, ಹುಬ್ಬಳ್ಳಿ ಆರೋಪಿಸಿದೆ.
ಸರಕಾರಿ ಶಾಲೆಗಳಿಗೆ ಸಂಬಂಧಿಸಿದಂತೆ ತರಬೇತಿಯಾಗಿರಬಹುದು, ದಾಖಲಾತಿಯಾಗಿರಬಹುದು, ಇನ್ನೀತರ ಯಾವುದೇ ವಿಷಯಕ್ಕೆ ಸಂಬAಧಿಸಿದಂತೆ ಇಲಾಖೆಯ ಕೆಳಹಂತದಿಂದ ಹಿಡಿದುಕೊಂಡು ಮೇಲ್ಮಟ್ಟದ ಅಭಿಪ್ರಾಯ ಸಂಗ್ರಹಿಸಿ ಸರಕಾರಿ ಶಾಲೆಯ ಶಿಕ್ಷಣದಲ್ಲಿ ಬದಲಾವಣೆ ತರುವಲ್ಲಿ ಕ್ರಮ ಕೈಕೊಳ್ಳುವುದು.
ಆದರೆ ಖಾಸಗಿ ಶಾಲೆಗಳಿಗೆ ಸಂಬಂಧಿಸಿದಂತೆ ಅದರ ನಿಯಂತ್ರಣವೂ ಸರಕಾರದ್ದೇ ಆಗಿರುತ್ತದೆ. ಇಲ್ಲಿ ಬದಲಾವಣೆ ತರಬೇಕಾದರೆ ಎಲ್ಲ ವಲಯದಿಂದ ಅಭಿಪ್ರಾಯ ಸಂಗ್ರಹಿಸಿ ನಿರ್ಣಯಗಳನ್ನು, ಆದೇಶಗಳನ್ನು ಮಾಡಬೇಕಾಗುತ್ತದೆ.
ಆದರೆ ಹಾಗಾಗದೇ ಸರಕಾರ ಖಾಸಗಿ ಶಾಲೆಗಳ ಶೈಕ್ಷಣಿಕವಾಗಿ ನಿರ್ಣಯ ತೆಗೆದುಕೊಳ್ಳಬೇಕಾದಾಗ ಬೆಂಗಳೂರಿನ ಶಾಲೆಗಳ, ಬೆಂಗಳೂರಿನ ಪಾಲಕರ ಬೆಂಗಳೂರಿನ ಚಿಂತಕರ ಅಭಿಪ್ರಾಯದ ಮೇಲೆ ನಿರ್ಣಯ ತೆಗೆದುಕೊಂಡು ಬೆಂಗಳೂರಿನ ಸಮಸ್ಯೆಯನ್ನು ಇಡೀ ರಾಜ್ಯದ ಸಮಸ್ಯೆ ಎಂದು ಬಿಂಬಿಸುತ್ತಿರುವುದು ನಡೆಯುತ್ತಿದೆ. ಇದ್ಯಾವ ನ್ಯಾಯ? ಎಂದು ಪ್ರಶ್ನಿಸಿದೆ.
ಈ ರೀತಿ ಸರಕಾರ ನಡೆದುಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಹಲವಾರುಬಾರಿ ಶಿಕ್ಷಣ ಸಚಿವರಿಗೆ ಲಿಖಿತಮೂಲಕ, ಧರಣಿ ಮೂಲಕವೂ ಗಮನಕ್ಕೆ ತರಲಾಗಿದೆ.
ಹೀಗಿರುವಾಗ ಎರಡು ದಿನಗಳ ಹಿಂದೆ ಶಿಕ್ಷಣ ಸಚಿವರು ಹೇಳಿಕೆಯ ಮೇಲೆ ಶಿಕ್ಷಣ ಕಾರ್ಯದರ್ಶಿಗಳು ಆದೇಶ ಮಾಡಿದ್ದಾರೆ. ಶಾಲಾ ಶುಲ್ಕವನ್ನು ಶೇಕಡಾ ೭೦ರಷ್ಟು ಬೋಧನಾ ಶುಲ್ಕವನ್ನು ಮಾತ್ರ ತೆಗೆದುಕೊಳ್ಳಬೇಕು.
ಉಳಿದ ಯಾವುದೇ ಶುಲ್ಕವನ್ನು ತೆಗೆದುಕೊಳ್ಳುವಂತಿಲ್ಲ ಎಂದಿದ್ದಾರೆ. ಒಂದುವೇಳೆ ಪೂರ್ಣ ಶುಲ್ಕ ಪಡೆದಿದ್ದಲ್ಲಿ ಶೇಕಡಾ ೩೦ರಷ್ಟು ಶಾಲಾ ಶುಲ್ಕವನ್ನು ಮುಂದಿನ ಶೈಕ್ಷಣಿಕ ಶುಲ್ಕದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಆದೇಶ ಮಾಡಿದ್ದಾರೆ.
ಅಂದರೆ ಒಟ್ಟು ಶೇಕಡಾ ೬೦ರಷ್ಟು ಶುಲ್ಕವನ್ನು ಪಡೆಯುವಂತಿಲ್ಲ ಎಂದಂತಾಯಿತು. ಇದು ಮೂರು ಲಕ್ಷ ಶುಲ್ಕ ಪಡೆಯುವ ಬೆಂಗಳೂರು ಶಾಲೆಗೂ ಮತ್ತು ಮೂರು ಸಾವಿರ ಶುಲ್ಕ ಪಡೆಯುವ ಶಾಲೆಗೂ ಒಂದೇ ಮಾನದಂಡ. ಯಾವ ಆಧಾರದ ಮೇಲೆ ಆದೇಶ ಹೊರಡಿಸಲಾಗಿದೆ? ಎಂದು ಕೇಳಿದರು.
ಶೇಕಡಾ ೩೦ರಷ್ಟು ಶುಲ್ಕದಲ್ಲಿ ಶಾಲೆಯ ಬಾಡಿಗೆ, ಕಟ್ಟಡ ಟ್ಯಾಕ್ಸ್, ವಿದ್ಯುತ್, ನೀರು, ಸ್ವಚ್ಛತೆ, ಶಿಕ್ಷಕರ ಪಿ.ಎಫ್, ಇ.ಎಂ.ಐ, ವಾಹನ ಮೆಂಟೇನೆನ್ಸ್, ವಾಹನ ವಿವಿಧ ತೆರಿಗೆಗಳು, ಇವನ್ನೆಲ್ಲ ಶಾಲೆಯ ಆಡಳಿತ ಮಂಡಳಿ ನಿರ್ವಹಿಸುತ್ತಿತ್ತು.
ಈಗ ಈ ಖರ್ಚನ್ನು ಹೇಗೆ ನಿಬಾಯಿಸುವುದು? ಯಾರು ಹಣ ಭರಿಸುವರು? ಸರಕಾರ ಭರಿಸುವುದೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂಥದರ ಮಧ್ಯ ಮೂಲವೇತನವನ್ನು ಶಿಕ್ಷಕರಿಗೆ ನೀಡತಕ್ಕದ್ದು ಎಂದು ಆದೇಶಿಸುತ್ತದೆ. ಮೂಲವೇತನ ನೀಡದಂತಹ ಶಾಲೆಗಳ ನವಿಕರಣ ಮಾಡದೇ ರದ್ದು ಮಾಡಲಾಗುವುದು ಎಂದೂ ಇಲಾಖೆ ಹೇಳುತ್ತಿದೆ.
ಇದೆಂಥ ಆಡಳಿತ? ಯಾವುದೇ ನಿರ್ಣಯ ಕೈಕೊಳ್ಳುವಾಗ ವೈಜ್ಞಾನಿಕವಾಗಿ ಆಲೋಚನೆ ಮಾಡಿ ಅದರ ಸಾದಕ ಬಾದಕಗಳನ್ನು ಯೋಚಿಸಬೇಕು.
ತಮಗೆ ಮನಸಿಗೆ ಬಂದಂತೆ ಆದೇಶಗಳನ್ನು, ಸುತ್ತೋಲೆಗಳನ್ನು ಹೊರಡಿಸುತ್ತಿರುವುದು ಶೈಕ್ಷಣಿಕ ಬೆಳವಣಿಗೆ ದೃಷ್ಟಿಯಿಂದ ತುಂಬಾ ಅಪಾಯಕಾರಕ ನಡೆ ಇದಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೋವಿಡ್ ಸಂದರ್ಭದಲ್ಲಿ ಎಲ್ಲರೂ ಆರ್ಥಿಕವಾಗಿ ಸಂಕಷ್ಟವನ್ನು ಎದುರಿಸಿದ್ದಾರೆ. ಶಾಲೆಯ ಶುಲ್ಕವನ್ನು ಪಾಲಕರಿಂದ ಪಡೆಯುವಲ್ಲಿ ಕಡಿಮೆ ತೆಗೆದುಕೊಳ್ಳುವ ಸಂಬಂಧದಂತೆ ನಮ್ಮದು ಭಿನ್ನಾಬಿಪ್ರಾಯವಿಲ್ಲ. ಆದರೆ ಈ ಅವೈಜ್ಞಾನಿಕದಿಂದ ಕೂಡಿದ ಆದೇಶದ ಬಗ್ಗೆ ತೀವೃವಾದ ವಿರೋಧವಿದೆ.
ಸರಕಾರ ಮತ್ತು ಇಲಾಖೆಗಳ ಇಂಥ ಹೇಳಿಕೆ, ಆದೇಶಗಳಿಂದ ಖಾಸಗಿ ಶಾಲೆಗಳು ಅಂದಕೂಡಲೇ ಎಲ್ಲರೂ ಕಾಮಾಲೆ ಕಣ್ಣಿನಿಂದ ನೋಡುವಂತೆ ಆಗಿದೆ.
ಬೆಂಗಳೂರಿನ ಶಾಲೆಗಳನ್ನು ಮುಂದಿಟ್ಟುಕೊAಡು ಎಲ್ಲ ಖಾಸಗಿ ಶಾಲೆಗಳು ಹಣ ಮಾಡುವ ದಂದೆ ಮಾಡುತ್ತಿವೆ ಎನ್ನುವಂತಾಗಿದೆ. ಪ್ರಾಮಾಣಿಕವಾಗಿ ಶಿಕ್ಷಣ ಪ್ರಸಾರ ಮಾಡುತ್ತಿರವ ಶಾಲೆಗಳ ಮೇಲೆ ಗಧಾಪ್ರಹಾರ ಮಾಡಿದಂತಾಗುತ್ತದೆ.
ಇದರಿಂದ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಶೈಕ್ಷಣಿಕವಾಗಿ ಇನ್ನಷ್ಟು ಹಿಂದುಳಿಯುವಂತೆ ಮತ್ತು ಎಷ್ಟೋ ಶಾಲೆಗಳು ಶಾಶ್ವತವಾಗಿ ಮುಚ್ಚುಕೊಳ್ಳುವಂತೆ ಮಾಡುತ್ತಿದ್ದೀರಿ.
ಇದರ ಪರಿಣಾಮ ಯಾವ ಅಧಿಕಾರಿಗಳ ಮೇಲೆ, ರಾಜಕಾರಣಿಗಳ ಮೇಲೆ ಆಗುವುದಿಲ್ಲ. ಆ ಭಾಗದ ಶೈಕ್ಷಣಿಕ ಪ್ರಗತಿಗೆ ದೊಡ್ಡ ಕೊಡಲಿ ಪೆಟ್ಟು ಬೀಳುವುದರಲ್ಲಿ ಎರಡು ಮಾತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಪತ್ರಿಕಾ ಗೋಷ್ಠಿಯಲ್ಲಿ ಜಯಪ್ರಕಾಶ ಟೆಂಗಿನಕಾಯಿ, ಶಂಕರ ಹಲಗತ್ತಿ, ರಾಘವೇಂದ್ರ ಸೊಂಡುರ, ಸಿದ್ಧೇಶ್ವರ ಸಾಲಿಮಠ, ರಾಜೇಂದ್ರ ಮಾಳವಾದೆ, ಜಯಪ್ರಕಾಶ ಟೆಂಗಿನಕಾಯಿ, ಮುರಳಿಧರ, ಮೇಚಣ್ಣವರ ಉಪಸ್ಥಿತರಿದ್ದರು.