ಧಾರವಾಡ prajakiran.com : ಇಲ್ಲಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ವಾಯವ್ಯ ಕರ್ನಾಟಕ ಶೈಕ್ಷಣಿಕ ವಲಯದ ನೂತನ ಅಪರ ಆಯುಕ್ತರಾಗಿ ಕೆ.ಎ.ಎಸ್. ಹಿರಿಯ ಶ್ರೇಣಿ ಅಧಿಕಾರಿ ರಮೇಶ ದೇಸಾಯಿ ಬುಧವಾರ ಅಧಿಕಾರ ವಹಿಸಿಕೊಂಡರು.
ಈ ಹುದ್ದೆಯಲ್ಲಿದ್ದ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಅವರು ಅಧಿಕಾರ ಹಸ್ತಾಂತರಿಸಿ ನೂತನ ಹೆಚ್ಚುವರಿ ಆಯುಕ್ತರಿಗೆ ಶುಭ ಕೋರಿದರು.
೨೦೦೬ರಲ್ಲಿ ಕೆ.ಎ.ಎಸ್. ತೇರ್ಗಡೆಯಾದ ದೇಸಾಯಿ ಅವರು ಬೈಲಹೊಂಗಲ, ಸಿಂಧನೂರ ಹಾಗೂ ಚಿಕ್ಕೋಡಿ ತಾಲೂಕುಗಳ ತಹಶೀಲದಾರರಾಗಿ ಸೇವೆಸಲ್ಲಿಸಿದ್ದಾರೆ.
ಅಸಿಸ್ಟಂಟ್ ಕಮೀಷನರ್(ಎಸಿ) ಹುದ್ದೆಯ ವೃಂದಕ್ಕೆ ಪದೋನ್ನತಿ ಹೊಂದಿದ ಇವರು, ಗದಗ ಉಪವಿಭಾಗಾಧಿಕಾರಿಯಾಗಿ, ಗದಗ ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿ, ಗದಗ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ, ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಯೋಜನಾ ನಿರ್ದೇಶಕರಾಗಿ, ಹುಬ್ಬಳ್ಳಿ ವಿದ್ಯುಚ್ಛಕ್ತಿ ಪ್ರಸರಣ ನಿಗಮದ (ಹೆಸ್ಕಾಂ) ಪ್ರಧಾನ ವ್ಯವಸ್ಥಾಪಕರಾಗಿ ಸೇವೆಸಲ್ಲಿಸಿದ್ದು, ನಿಕಟಪೂರ್ವದಲ್ಲಿ ಹಾವೇರಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿದ್ದರು
ಶಿಕ್ಷಣ ಇಲಾಖೆಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ನಿರ್ದೇಶಕರಾದ ಮಮತಾ ನಾಯಕ, ಪ್ರಭಾರ ಜಂಟಿ ನಿರ್ದೇಶಕ ಮೃತ್ಯುಂಜಯ ಕುಂದಗೋಳ, ಉಪನಿರ್ದೇಶಕ ಆರ್.ಎಸ್. ಮುಳ್ಳೂರ, ಜಿಲ್ಲಾ ಆಡಳಿತ ಉಪನಿರ್ದೇಶಕ ಮೋಹನಕುಮಾರ ಹಂಚಾಟೆ, ಅಭಿವೃದ್ಧಿ ಉಪನಿರ್ದೇಶಕ ಅಬ್ದುಲ್ ವಾಜೀದ್ ಖಾಜಿ, ಚಿಕ್ಕೋಡಿ ಡಿಡಿಪಿಐ ಗಜಾನನ ಮನ್ನಿಕೇರಿ, ಬಿಇಓಗಳಾದ ಉಮೇಶ ಬೊಮ್ಮಕ್ಕನವರ, ಎ.ಎ. ಶೇಖ, ಅಶೋಕಕುಮಾರ ಸಿಂದಗಿ ಸೇರಿದಂತೆ ಇಲಾಖೆಯ ವಿವಿಧ ಶ್ರೇಣಿ ಅಧಿಕಾರಿಗಳು ಹಾಗೂ ಶಿಕ್ಷಕರ ಸಂಘಗಳ ಪದಾಧಿಕಾರಿಗಳು ಹಾಜರಿದ್ದು ಶಿಕ್ಷಣ ಇಲಾಖೆಯ ನೂತನ ಹೆಚ್ಚುವರಿ ಆಯುಕ್ತ ರಮೇಶ ದೇಸಾಯಿ ಅವರನ್ನು ಸ್ವಾಗತಿಸಿ ಅಭಿನಂದಿಸಿದರು.