ಗಂಗಾವತಿ prajakiran.com : ರಾಜ್ಯದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಒಂದಿಲ್ಲ ಒಂದು ಯಡವಟ್ಟು ಮಾಡುವ ಮೂಲಕ ವಿವಾದಕ್ಕೆ ಸಿಲುಕುತ್ತಲೇ ಇದೆ.
ರಾಜ್ಯದಅನೇಕ ಕಡೆ ಈ ರೀತಿಯ ವರದಿಗಳು ಬೆಳಕಿಗೆ ಬರುತ್ತಿದ್ದರೂ ಸಿಬ್ಬಂದಿ ಮಾತ್ರ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ.
ಇದಕ್ಕೆ ಮತ್ತೊಂದು ತಾಜಾ ನಿರ್ದಶನವೆಂಬಂತೆ ಗಂಗಾವತಿಯಲ್ಲಿ ನೆಗೆಟಿವ್ ಇದ್ದ ಯುವಕನನ್ನು ಪಾಸಿಟಿವ್ ಎಂದು ಕೋವಿಡ್ ನಿಯೋಜಿತ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದರಿಂದಾಗಿ ಕಂಗಲಾದ ಯುವಕ ಎಲ್ಲಿ ತನಗೂ ಕರೋನಾ ವಕ್ಕರಿಸುತ್ತದೆಯೋ ಎಂಬ ಆತಂಕದಲ್ಲಿಯೇ ತನ್ನ ದುಗುಡವನ್ನು ವೀಡಿಯೋ ಮೂಲಕ ಹೊರ ಹಾಕಿದ್ದಾನೆ.
ಗಂಗಾವತಿ ತಾಲೂಕಿನ ಹೊಸಳ್ಳಿ ಗ್ರಾಮದ ಯುವಕ ಅಮರೇಶ್ ಈ ಬಗ್ಗೆ ತನ್ನ ಅಳಲುತೋಡಿಕೊಂಡಿದ್ದಾನೆ. ಆರೋಗ್ಯ ಕೇಂದ್ರದಲ್ಲಿ ವಿಚಾರಿಸಿದರೆ ಯಾರು ಸರಕಾತ್ಮಕವಾಗಿ ಸ್ಪಂದಿಸುತ್ತಿಲ್ಲ.
ತನಗೂ ಕರೋನಾ ವಾರ್ಡ್ ಗೆ ಕರೆದುಕೊಂಡು ಬಂದಿರುವುದರಿಂದ ಆತಂಕ ಎದುರಾಗಿದೆ ಎಂದು ಬೇಸರ ಹೊರ ಹಾಕಿದ್ದಾನೆ.
ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಅಂಬೇಡ್ಕರ್ ವಾದ ಬಣದ ಸಂಚಾಲಕ ಹನುಮಂತಪ್ಪ, ಗಂಗಾವತಿ ನಗರದ ಆರೋಗ್ಯ ಇಲಾಖೆ ಯಡವಟ್ಟನ್ನು ಖಂಡಿಸಿದ್ದಾರೆ.
ಆರೋಗ್ಯ ಸಂಸ್ಥೆ ನೆಗೆಟಿವ್ ಎಂದು ಸಂದೇಶ ರವಾನಿಸಿದೆ. ಆದರೆ ಸ್ಥಳೀಯ ವೈದ್ಯಾಧಿಕಾರಿಗಳು ಪಾಸಿಟಿವ್ ಎಂದು ತಳಕಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದೆ ಎಂದು ಆರೋಪಿಸಿದ್ದಾರೆ.
ಈವರೆಗೆ 152 ಜನರಿಗೆ ಗಂಗಾವತಿ ಪಟ್ಟಣದಲ್ಲಿಯೇ ಕರೋನಾ ಪಾಸಿಟಿವ್ ಬಂದಿರುವುದು ನೋಡಿದರೆ ಇದು ದುಡ್ಡು ಹೊಡೆಯುವ ತಂತ್ರವಾಗಿದೆ ಎಂಬ ಅನುಮಾನ ಕಾಡುತ್ತಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಅಲ್ಲದೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾಡಿರುವ ಆರೋಪ ಮೇಲ್ನೋಟಕ್ಕೆ ಸತ್ಯ ಎಂಬಂತೆ ಕಂಡು ಬರುತ್ತಿದೆ ಎಂದು ತಮ್ಮಅಸಮಾಧಾನ ಹೊರ ಹಾಕಿದ್ದಾರೆ.