ಧಾರವಾಡ prajakiran.com : ಧಾರವಾಡ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳ ತಂಡ ಭಾನುವಾರ ಧಾರವಾಡ ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ ಸೇರಿ ಹಲವರ ವಿಚಾರಣೆ ನಡೆಸಿದರು.
ಧಾರವಾಡದ ಉಪನಗರ ಪೊಲೀಸ್ ಠಾಣೆಗೆ ಆಗಮಿಸಿದ ಶಿವಾನಂದ ಕರಿಗಾರ ಅವರನ್ನು ಗಂಟೆಗಳಿಗೂ ಅಧಿಕ ಕಾಲ ಸಿಬಿಐ ಅಧಿಕಾರಿಗಳ ತಂಡ ವಿಚಾರಣೆ ನಡೆಸಿ ಹತ್ತು ಹಲವು ಪ್ರಶ್ನೆಗಳ ಮೂಲಕ ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಿದರು ಎನ್ನಲಾಗಿದೆ.
ಇದೇ ವೇಳೆ ಭಾನುವಾರ ಕೂಡ ಅನೇಕರು ಧಾರವಾಡದ ಉಪನಗರ ಪೊಲೀಸ್ ಠಾಣೆಗೆ ಆಗಮಿಸಿ ಸಿಬಿಐ ಎದುರು ವಿಚಾರಣೆಗೆ ಹಾಜರಾದರು.
ಈ ಹಿಂದೆ ಕೂಡ ಕರಿಗಾರ ಅವರನ್ನು ನಾಲ್ಕೈದು ಬಾರಿ ಸಿಬಿಐ ಅಧಿಕಾರಿಗಳ ತಂಡ ವಿಚಾರಣೆಗೆ ಒಳಪಡಿಸಿರುವುದನ್ನು ಇಲ್ಲಿ ಸ್ಮರಿಸಬಹುದು.