ಗದಗ prajakiran.com : ಕೆಲವರ ಕಿರುಕಳಕ್ಕೆ ಬೇಸತ್ತು ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಪೊಲೀಸ್ ಪೇದೆಯೊಬ್ಬರು ಡೆತ್ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ.
ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಲಕ್ಕುಂಡಿ ಗ್ರಾಮದ ಅಜ್ಜುಗೌಡ ಪಾಟೀಲ್ ಸಾವಿಗೆ ಶರಣಾದ ಪೊಲೀಸ್ ಪೇದೆಯಾಗಿದ್ದಾರೆ.
ಕಳೆದ ಒಂದು ವರ್ಷದ ಹಿಂದೆ ಹಣ ಡಬ್ಲಿಂಗ್ ಪ್ರಕರಣದಲ್ಲಿ ಆರೋಪಿ ಒಬ್ಬನನ್ನು ಬಂಧಿಸಲಾಗಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಸಂದರ್ಭದಲ್ಲಿ ಆರೋಪಿಯ ಸಂಬಂಧಿಯೊಬ್ಬರ ಜೊತೆ ಮೃತ ಪೇದೆ ಚಾಟಿಂಗ್ ಮಾಡುತ್ತಿದ್ದಾನೆಂಬ ಆರೋಪ ಕೇಳಿ ಬಂದಿತ್ತು.
ಚಾಟಿಂಗ್ ಸಂದರ್ಭದಲ್ಲಿ ಅರೆಬರೆ ದೃಶ್ಯದ ವಿಡಿಯೋ ವೈರಲ್ ಆಗಿತ್ತು ಎನ್ನಲಾಗಿದೆ.
ವೈರಲ್ ಆಗಿದ್ದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಮೃತ ಪೇದೆಗೆ ಬ್ಲ್ಯಾಕ್ಮೇಲ್ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ವಿಷಯ ಕುಟುಂಬದವರಿಗೂ ತಿಳಿದಿತ್ತು ಎನ್ನಲಾಗಿದೆ. ಇದರಿಂದ ಬೇಸತ್ತಿದ್ದ ಅಜ್ಜುಗೌಡ ಮಾನಸಿಕವಾಗಿ ಕುಗ್ಗಿದ್ದ ಎಂದು ಹೇಳಲಾಗುತ್ತಿದೆ.
ಅಲ್ಲದೆ, ಅಜ್ಜುಗೌಡ ತನಗೆ ಯಾರ್ಯಾರು ಬ್ಲಾಕ್ ಮೇಲ್ ಮಾಡುತ್ತಿದ್ದರು ಎಂದು ಆಪ್ತರೆದುರಿಗೆ ಅಳಲು ತೊಡಿಕೊಂಡಿದ್ದ.
ಬುಧವಾರ ಕುಟುಂಬಸ್ಥರು ಊರಿಗೆ ಹೋಗಿದ್ದಾಗ ಅಜ್ಜುಗೌಡ ಮಹಡಿ ಮನೆಯ ಬೆಡ್ ರೂಮ್ನಲ್ಲಿ ಹಗ್ಗದಿಂದ ನೇಣು ಬಿಗಿದುಕೊಂಡಿದ್ದಾನೆ.
ಸಾವಿಗೂ ಮುನ್ನ ನಾಲ್ಕು ಪುಟಗಳ ಸುದೀರ್ಘ ಡೆತ್ನೋಟ್ನಲ್ಲಿ ಕೆಲವರ ಹೆಸರನ್ನು ಬರೆದಿಟ್ಟು, ಸಾವಿಗೆ ಶರಣಾಗಿದ್ದಾನೆ ಎಂದು ಹೇಳಲಾಗುತ್ತಿದ್ದು, ಅಜ್ಜುಗೌಡಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದವರು ಯಾರು ಎಂಬುವುದು ಇನ್ನಷ್ಟೇ ತಿಳಿದುಬರಬೇಕಿದೆ.
ಸುದ್ದಿ ತಿಳಿದ ತಕ್ಷಣ ಗದಗ ಎಸ್ ಪಿ ಶಿವಪ್ರಕಾಶ್ ದೇವರಾಜು ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ