ಬೆಂಗಳೂರು prajakiran.com : ರಾಜ್ಯ ಪೊಲೀಸ್ ಇಲಾಖೆಯ ಶೇ. 95 ರಷ್ಟು ಸಿಬ್ಬಂದಿಗೆ ಈಗಾಗಲೇ ಕೊರೋನಾ ಲಸಿಕೆ ಹಾಕಲಾಗಿದ್ದು, ಮುಂದಿನ ದಿನಗಳಲ್ಲಿ ಎರಡನೇ ಹಂತವಾಗಿ ಪೊಲೀಸ್ ಸಿಬ್ಬಂದಿಯ ಕುಟುಂಬದವರಿಗೂ ಕೊರೊನಾ ಲಸಿಕೆ ನೀಡಲಾಗುವುದು ಎಂದು ಗೃಹ,ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸೋಮವಾರ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಸಚಿವರಾದ ಆರ್ ಅಶೋಕ್ ಹಾಗೂ ಡಾ. ಕೆ ಸುಧಾಕರ್ ಜೊತೆ ಭೇಟಿ ನೀಡಿ ಬ್ಲಾಕ್ ಫಂಗಸ್ ಸೋಂಕಿನ ಕುರಿತು ವೈದ್ಯಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ ಬಳಿಕ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ಪೊಲೀಸರಷ್ಟೇ ಅಲ್ಲ. ಪೊಲೀಸರ ಕುಟುಂಬದವರು ಕೂಡ ಕೊರೋನಾ ಯೋಧರು ಎಂದು ಪರಿಗಣಿಸಿ ಎರಡನೇ ಹಂತದಲ್ಲಿ ಅವರಿಗೂ ಕೊರನಾ ಲಸಿಕೆ ಹಾಕಲಾಗುವುದು.
ಈಗಾಗಲೇ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಈ ಸಂಬಂಧ ಸೂಚನೆ ನೀಡಲಾಗಿದೆ ಎಂದರು.
ರಾಜ್ಯದಲ್ಲಿನ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪೊಲೀಸರಿಗಾಗಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲಾಗಿದೆ.
ಅಲ್ಲಿ ಆಕ್ಸಿಜನ್ ಕಾನ್ಸೆಂಟ್ರೇಟರ್ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಖ್ಯೆಯ ಆಕ್ಸಿಜನ್ ಕಾನ್ಸೆಂಟ್ರೇಟರ್ ಗಳನ್ನು ಅಲ್ಲಿ ಅಳವಡಿಸಲಾಗುವುದು ಎಂದು ಹೇಳಿದರು.
ನಮ್ಮ ಇಲಾಖೆಯಲ್ಲಿ ಹಲವಾರು ವಾಹನಗಳಿವೆ. ಕೆ ಎಸ್ ಆರ್ ಪಿ ಯಲ್ಲಿ ಬಸ್ಸುಗಳಿವೆ. ಅವುಗಳನ್ನು ಅಂಬುಲೆನ್ಸ್ ಗಳನ್ನಾಗಿ ಪರಿವರ್ತನೆ ಮಾಡಲು ನಿರ್ಧರಿಸಲಾಗಿದೆ.
ಎಲ್ಲ ವಲಯಗಳಲ್ಲಿನ ಕೆ ಎಸ್ ಆರ್ ಪಿ ವಾಹನಗಳನ್ನು ಅಂಬುಲೆನ್ಸ್ ಗಳನ್ನಾಗಿ ಪರಿವರ್ತನೆ ಮಾಡಿ ಕೋವಿಡ್ ಕೇರ್ ಸೆಂಟರ್ ಗೆ ಜೋಡಣೆ ಮಾಡುವಂತೆ ಸೂಚಿಸಲಾಗಿದೆ ಎಂದು ಬಸವರಾಜ್ ಬೊಮ್ಮಾಯಿ ತಿಳಿಸಿದರು.
ಬ್ಲ್ಯಾಕ್ ಫಂಗಸ್ ಸೋಂಕಿನ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ೧೦ ಹಾಸಿಗೆಗಳನ್ನು ಪ್ರತ್ಯೇಕವಾಗಿ ತೆಗೆದಿಡಲು ಸರ್ಕಾರ ಕ್ರಮಕೈಗೊಳ್ಳಲಿದೆ ಎಂದು ಹೇಳಿದರು.
ಔಷಧಿ ವಿಚಾರವಾಗಿ ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿವಿ ಸದಾನಂದ ಗೌಡರ ಜೊತೆ ಮಾತುಕತೆ ನಡೆಸಲಾಗಿದೆ.
ಅವರು ನಮ್ಮ ಮನವಿಯ ಮೇರೆಗೆ ಔಷಧಿ ಉತ್ಪಾದನೆಯನ್ನು ಹೆಚ್ಚು ಮಾಡುವಂತೆ ಔಷಧಿ ಕಂಪನಿಗಳಿಗೆ ಸೂಚಿಸಿದ್ದಾರೆ.
ಬಸವರಾಜ್ ಬೊಮ್ಮಾಯಿ,
ಗೃಹ ಸಚಿವರು