ಧಾರವಾಡ prajakiran.com : ಕರೋನಾ ನಿಯಂತ್ರಣ ಮಾಡುವಲ್ಲಿ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರಕಾರ ವಿಫಲವಾಗಿವೆ ಎಂದು ಟೀಕಿಸುವ ಭರದಲ್ಲಿ ಕಾಂಗ್ರೆಸ್ ಪಕ್ಷದ ಧಾರವಾಡ ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ನಡೆದ ಆರೋಗ್ಯ ಹಸ್ತ ತರಬೇತಿ ಕಾರ್ಯಕ್ರಮದಲ್ಲಿ ಭಾಷಣ ಮಾಡುವಾಗ ಈ ಯಡವಟ್ಟು ಮಾಡಿಕೊಂಡಿದ್ದಾರೆ.
ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಜಿಲ್ಲೆಯಲ್ಲಿ ಚರ್ಚೆಗೆ ಕಾರಣವಾಗಿದೆ.
ನಮ್ಮ ದೇಶದಲ್ಲಿ ಪ್ರತಿನಿತ್ಯ 70 ಸಾವಿರ ಕರೋನಾ ಕೇಸ್ ಗಳು ಬರುತ್ತಿದ್ದರೆ, ಅಲ್ಲಿ ಕೇವಲ 300-400 ಮಾತ್ರ ಬರುತ್ತಿವೆ. ಅಲ್ಲಿ ಗ್ರಾಫ್ ಇಳಿಯುತ್ತಿದ್ದರೆ ಇಲ್ಲಿ ಏರಿಕೆಯಾಗುತ್ತಿದೆ.
ಪಾಕಿಸ್ತಾನ ಮತ್ತು ನಮ್ಮದು ಜೀನ್ಸ್ ಒಂದೇ. ಆದರೆ ಅಲ್ಲಿ ಕಡಿಮೆ ಕರೊನಾ ಕೇಸ್ ಬರುತ್ತಿವೆ. ನಮ್ಮಲ್ಲಿ ಮಾತ್ರ ಹೆಚ್ಚು ಬರುತ್ತಿವೆ ಎಂದು ಹೇಳಿದ್ದಾರೆ.
ಕೊರೋನಾ ನಿಯಂತ್ರಣದಲ್ಲಿ ವಿಫಲವಾಗಿವೆ ಎಂದು ಟೀಕಿಸುವ ಭರದಲ್ಲಿ ನೆರೆಯ ಶತ್ರು ರಾಷ್ಟ್ರ ಪಾಕಿಸ್ತಾನ ಹೊಗಳಿದ ಅನಿಲಕುಮಾರ ಪಾಟೀಲ ಹೇಳಿಕೆ ಇದೀಗ ಚರ್ಚೆಗೆ ಕಾರಣವಾಗಿದೆ.
ಆದರೆ ಈ ಕುರಿತು ಸ್ಪಷ್ಟನೆ ನೀಡಿರುವಅವರು ನಾನು ಪಾಕಿಸ್ತಾನ ಹೊಗಳಿಲ್ಲ. ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಜನರ ರೋಗ ನಿರೋಧಕ ಶಕ್ತಿಯ ಕುರಿತು ಮಾತನಾಡಿದ್ದೇನೆ.ವೀಡಿಯೋದಲ್ಲಿನ ನನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಜಾರಿಕೊಂಡಿದ್ದಾರೆ.