ಧಾರವಾಡ prajakiran.com : ಗುಣಮಟ್ಟದ ಶಿಕ್ಷಣದ ಉದ್ದೇಶವನ್ನಿಟ್ಟುಕೊಂಡು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯು ಹತ್ತು ದಿನಗಳ ಬದಲು ಈಗ ಮತ್ತೆ ಐದು ದಿನಗಳ ತರಬೇತಿ ಕಾರ್ಯಾಗಾರ ನಡೆಸಲು ಮುಂದಾಗಿರುವುದಕ್ಕೆ ಕರ್ನಾಟಕ ರಾಜ್ಯ ಸಾವಿತ್ರಿ ಬಾಯಿ ಪುಲೆ ಶಿಕ್ಷಕಿಯರ ಸಂಘದ ರಾಜ್ಯಾಧ್ಯಕ್ಷೆ ಲತಾ ಮುಳ್ಳೂರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ಒಂದೂವರೆ ವರ್ಷದಲ್ಲಿ ಎರಡು ಬಾರಿ ಶಿಕ್ಷಕರಿಗೆ ಬಿ. ಆರ್. ಸಿ. ಮಟ್ಟದಲ್ಲಿ ಹಾಗೂ ತಾಲ್ಲೂಕು ಮಟ್ಟದಲ್ಲಿ ತರಬೇತಿಯನ್ನು ನೀಡಿದೆ.
ಈ ನಿಟ್ಟಿನಲ್ಲಿ ಶಿಕ್ಷಕರಿಗೆ ಮತ್ತೊಮ್ಮೆ ತರಬೇತಿಯನ್ನು ಕೊಡುವುದು ಒಳ್ಳೆಯ ನಿರ್ಧಾರವೇ . ಆದರೆ ದಿನೇ ದಿನೇ ಕರೋನಾ ಉಲ್ಬಣಗೊಳ್ಳುತ್ತಿರುವ ಸಂದರ್ಭದಲ್ಲಿ ಕಾರ್ಯಾಗಾರ ನಡೆಸುವುದು ಎಷ್ಟು ಸೂಕ್ತ ?. ಎಂದು ಪ್ರಶ್ನಿಸಿದ್ದಾರೆ.
ತರಬೇತಿಯನ್ನು ನೀಡಲು ನಮ್ಮ ಅಭ್ಯಂತರವಿಲ್ಲ. ಕರೋನಾ ಹಾವಳಿ ತಗ್ಗಿದ ಬಳಿಕ ತರಬೇತಿಯನ್ನು ನೀಡಿ ಎಂದು ಸಲಹೆ ನೀಡಿದ್ದಾರೆ. ಸರ್ಕಾರವೇ ಗುಂಪು ಗೂಡಬಾರದೆಂಬ ಹೇಳುತ್ತಿದೆ .
ಇಂತಹ ಸಂಕಷ್ಟದ ಸಂದರ್ಭದಲ್ಲಿ ತರಬೇತಿ ಕಾರ್ಯಾಗಾರಗಳನ್ನು ಮಾಡಲು ಇಲಾಖೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬೇರೆ ಬೇರೆ ಪ್ರದೇಶಗಳಿಂದ ಶಿಕ್ಷಕರು ಬಂದಿರುತ್ತಾರೆ.ಕೊಠಡಿಗಳನ್ನು ಸ್ಯಾನಿ ಟೈಸ್ ಮಾಡಿದ್ದರೂ ಒಂದೆಡೆ ಗುಂಪು ಗೂಡಿಸುವುದು. ಗುಂಪು ಚಟುವಟಿಕೆಗಳನ್ನು ಮಾಡುವುದು.
ಇಡೀದಿನ ಮಾಸ್ಕ ಧರಿಸಿ ಕುಳಿತುಕೊಳ್ಳುವುದು ಶಿಕ್ಷಕರಿಗೆ ಬಹಳ ತೊಂದರೆಯಾಗುತ್ತದೆ. ಅಲ್ಲದೆ, ಮುಖಾಮುಖಿ ತರಬೇತಿ ಅಪಾಯಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ದೂರಿದ್ದಾರೆ.
ಈಗಾಗಲೇ ಕ್ಲಸ್ಟರ್ ಹಂತದಲ್ಲಿ ಕೆಲವು ತರಬೇತಿಗಳು ಆನ್ ಲೈನ್ ನಲ್ಲಿಯೇ ನಡೆಯುತ್ತಿವೆ. ಎಲ್ಲಾ ಶಿಕ್ಷಕರು ಇದಕ್ಕೆ ಸ್ಪಂದಿಸುತ್ತಿದ್ದಾರೆ.
ಹಾಗಾಗಿ ಈಗ ನಿರ್ಧರಿಸುವಂತಹ ಕಾರ್ಯಾಗಾರವನ್ನು ಸಹ ಆನ್ ಲೈನ್ ನಲ್ಲಿಯೇ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಆ ಮೂಲಕ ಶಿಕ್ಷಕರು ಹಾಗೂ ಅವರ ಕುಟುಂಬಕ್ಕೆ ಆಗುವ ಅಪಾಯವನ್ನು ತಪ್ಪಿಸಬೇಕೆಂದು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ನಿರ್ದೇಶಕರಿಗೆ ಕರ್ನಾಟಕ ರಾಜ್ಯ ಸಾವಿತ್ರಿ ಬಾಯಿ ಪುಲೆ ಶಿಕ್ಷಕಿಯರ ಸಂಘದ ರಾಜ್ಯಾಧ್ಯಕ್ಷೆ ಲತಾ ಮುಳ್ಳೂರ ಮನವಿ ಮಾಡಿದ್ದಾರೆ.