ಧಾರವಾಡ prajakiran.com : ವಿದ್ಯಾನಗರಿ ಧಾರವಾಡ ಜಿಲ್ಲೆಯಲ್ಲಿ ಕರೋನಾ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದೆ.
, ಈಗಾಗಲೇ ಜಿಲ್ಲೆಯ ಒಟ್ಟು ಪ್ರಕರಣಗಳ ಸಂಖ್ಯೆ 3380 ಕ್ಕೆ ಏರಿದ್ದು, ಈ ಪೈಕಿ ಇದುವರೆಗೆ 1389 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇದಲ್ಲದೆ, ಇನ್ನುಳಿದ 1888 ಜನರು ಜಿಲ್ಲೆಯ ವಿವಿಧ ಕೋವಿಡ್ ನಿಯೋಜಿತ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದರಲ್ಲಿ 36 ಜನ ಐಸಿಯುನಲ್ಲಿದ್ದಾರೆ. ಈವರೆಗೆ ಒಟ್ಟು 103 ಜನ ಧಾರವಾಡ ಜಿಲ್ಲೆಯಲ್ಲಿ ಕರೋನಾ ಹಾಗೂ ಇನ್ನಿತರ ಸೊಂಕಿನಿಂದ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಇಷ್ಟೆಲ್ಲಾ ಆವಾಂತರಗಳಾದರೂ ಧಾರವಾಡ ಜಿಲ್ಲಾಡಳಿತದ ಗಂಟಲು ತಪಾಸಣೆ ವರದಿ ಹಾಗೂ ಸೀಲ್ ಡೌನ್ ಪ್ರಕ್ರಿಯೆ ಚುರುಕುಗೊಳ್ಳದಿರುವುದು ಜಿಲ್ಲೆಯ ಜನತೆಯನ್ನು ಆತಂಕ ಹಾಗೂ ಸಂಕಷ್ಟಕ್ಕೆ ಸಿಲುಕಿಸಿದೆ.
ಇದಕ್ಕೆ ಉತ್ತಮ ನಿರ್ದಶನವೆಂಬಂತೆ ಧಾರವಾಡದ ಎಂ. ಆರ್. ನಗರದ 5 ನೇ ಕ್ರಾಸ್ ನಲ್ಲಿ ಶನಿವಾರವೇ ಕರೋನಾ ಸೋಂಕು ದೃಢಪಟ್ಟಿದ್ದರೂ ಈವರೆಗೆ ಈ ಬಡಾವಣೆಯನ್ನು ಸೀಲ್ ಡೌನ್ ಮಾಡುವ ಕೆಲಸಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಲಯ ಕಚೇರಿ ಮುಂದಾಗಿಲ್ಲ.
ಇದು ಸ್ಥಳೀಯ ನಿವಾಸಿಗಳನ್ನು ಬೆಚ್ಚಿಬೀಳುವಂತೆ ಮಾಡಿದ್ದು, ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಸಕರಾತ್ಮಕ ಸ್ಪಂದನೆ ಸಿಕ್ಕಿಲ್ಲ.
ನಾವು ಹೇಳಿ ಹೇಳಿ ಬೇಸತ್ತು ಹೋಗಿದ್ದೇವೆ ಎಂದು ಪ್ರಜಾಕಿರಣ.ಕಾಮ್ ಗೆ ಸ್ಥಳೀಯರು ತಮ್ಮಅಳಲು ತೋಡಿಕೊಂಡಿದ್ದಾರೆ.
ಕರೋನಾ ಸೋಂಕಿತರ ಪ್ರಾಥಮಿಕ ಸಂಪರ್ಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆ ಮಾಡಿ ಅವರನ್ನು ಗಂಟಲು ತಪಾಸಣೆ ಮಾಡಿಸುವ ಕೆಲಸ ಕಾರ್ಯ ಕೂಡ ವೇಗ ಪಡೆಯುತ್ತಿಲ್ಲ.
ಕರೋನಾ ಸೋಂಕಿತನ ಸಂಪರ್ಕದಲ್ಲಿದ್ದವರು ಶನಿವಾರವೇ ತಪಾಸಣೆ ಮಾಡಿಸಿಕೊಂಡರು ಈವರೆಗೆ ವರದಿ ಬಂದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಅಲ್ಲದೆ, ಎಂ.ಆರ್. ಬಡಾವಣೆಯನ್ನು ಈವರೆಗೆ ಸ್ಯಾನಿಟೇಶನ್ ಮಾಡುವುದಾಗಿ, ಸೀಲ್ ಡೌನ್ ಮಾಡುವುದಾಗಲಿ ಮಾಡಿಲ್ಲ.
ಇಡೀ ಸರಕಾರದ ವ್ಯವಸ್ಥೆಯೇ ಹದಗೆಟ್ಟುಹೋಗಿದೆ. ಈ ಬಗ್ಗೆ ನಮಗೆ ಬೇಸರವಾಗಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಬಿಜೆಪಿ ಮುಖಂಡರು ತಮ್ಮಅಳಲನ್ನು ತೋಡಿಕೊಂಡರು.
ಈ ಹಿಂದೆ ಸೀಲ್ ಡೌನ್ ಮಾಡುತ್ತಿದ್ದ ಗುತ್ತಿಗೆದಾರರನ್ನು ಕೈ ಬಿಡುವಂತೆ ಪಾಲಿಕೆ ಮೇಲೆ ಬಿಜೆಪಿ ಶಾಸಕರು ಒತ್ತಡ ಹೇರಿದ್ದಕ್ಕೆ ಸೀಲ್ ಡೌನ್ ಕಾರ್ಯ ವಿಳಂಭವಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಈಗಲಾದರೂ ಈ ಬಗ್ಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಧಾರವಾಡ ಜಿಲ್ಲಾಡಳಿತ ಸ್ವಲ್ಪ ಸಕರಾತ್ಮಕವಾಗಿ ಸ್ಪಂದಿಸುತ್ತಾ ಇಲ್ಲವೇ ಎಂಬುದು ಕಾದು ನೋಡಬೇಕಿದೆ.