ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಗೆ ಮಾನ ಮರ್ಯಾದೆ ಇದೆಯಾ ಎಂದು ಕಿಡಿ ಕಾರಿದ ಪಿ.ಎಚ್. ನೀರಲಕೇರಿ
ಯಡಿಯೂರಪ್ಪ ಹೇಳಿದ ಅಂತ ಮೋಹನ ಲಿಂಬಿಕಾಯಿಗೆ ಟಿಕೇಟ್ ಕೊಟ್ಟರೆ ಹುಷಾರ್ ಎಂದು ಎಚ್ಚರಿಕೆ
ಧಾರವಾಡ ಪ್ರಜಾಕಿರಣ.ಕಾಮ್ : ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹೊತ್ತ
ಸುರ್ಜೇವಾಲಾಗೆ ಉತ್ತರ ಕರ್ನಾಟಕ, ಧಾರವಾಡ ಜಿಲ್ಲೆಯ ಬಗ್ಗೆ ಅವನಿಗೆ ಎನ್ ಬದನೆಕಾಯಿ ಗೊತ್ತು ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಪಿ.ಎಚ್. ನೀರಲಕೇರಿ ಹರಿಹಾಯ್ದಿದ್ದಾರೆ.
ಅವರು ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಜಯಪುರ, ಬಾಗಲಕೋಟೆ ಟಿಕೇಟ್ ಆಕಾಂಕ್ಷಿಗಳು ತಮ್ಮ ಮನವಿ ಅಹವಾಲು ಕೊಡಲು ಕಾಲಿಗೆ ಬಿದ್ದರೆ, ಅವರನ್ನು ಒದ್ದುಕೊಂಡು ಹೋಗುತ್ತಾನೆ ಎಂದು ಎಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಗೆ ಮಾನ ಮರ್ಯಾದೆ ಇದೆಯಾ ಎಂದು ಕಿಡಿ ಕಾರಿದ ಪಿ.ಎಚ್. ನೀರಲಕೇರಿ, ಇವರು ಮುಖ್ಯಮಂತ್ರಿ ಆಗಲು ಓಡಾಡುತ್ತಿದ್ದಾರೆ. ಇನ್ನು ಕೆಲವರು ಮಂತ್ರಿಸ್ಥಾನಕ್ಕಾಗಿ ಪರದಾಡುತ್ತಿದ್ದಾರೆ. ನಾವು ಜನರ ಸೇರಿಸಿ ಕಾರ್ಯಕ್ರಮ ಮಾಡಿದರೆ ಇವು ನಾಯಕರಲ್ವೇ ಎಂದು ವಾಗ್ದಾಳಿ ನಡೆಸಿದರು.
ಯಡಿಯೂರಪ್ಪ ಹೇಳಿದ ಅಂತ ಮೋಹನ ಲಿಂಬಿಕಾಯಿಗೆ ಟಿಕೇಟ್ ಕೊಟ್ಟರೆ ಹುಷಾರ್ ಎಂದು ಎಚ್ಚರಿಕೆ ಕೊಟ್ಟ ನೀರಲಕೇರಿ ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಒಂದು ವೇಳೆ ಮೋಹನ್ ಲಿಂಬಿಕಾಯಿಗೆ ಬಿ ಫಾರ್ಮ್ ನೀಡಿದರೆ ನಾವು ಸಿ ಫಾರ್ಮ್ ತರುತ್ತೇವೆ ಎಂದು ಗುಡುಗಿದರು.
ನಾವು ಇದನ್ನು ಇಲ್ಲಿಗೆ ಬಿಡಲ್ಲ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮಲ್ಲಿಕಾರ್ಜುನ ಖರ್ಗೆ ಬಳಿಗೆ ತೆಗೆದುಕೊಂಡು ಹೋಗುತ್ತವೆ ಎಂದರು.
ಕಳೆದ ಕೆಲವು ವರ್ಷಗಳಿಂದ ನಾನು, ದೀಪಕ ಚಿಂಚೋರೆ, ಮಯೂರ ಮೊರೆ, ಕೀರ್ತಿ ಮೊರೆ, ಬಸವರಾಜ ಮಲಕಾರಿ, ನಾಗರಾಜ ಗೌರಿ, ಜಗದೀಶ್ ಘೋಡಕೆ, ಶರಣಪ್ಪ ಕೊಟಗಿ, ರಫೀಕ್ ಸಾವಂತ್ ಸೇರಿದಂತೆ ಅನೇಕರು ಪಕ್ಷ ಸಂಘಟನೆ ಜೊತೆಗೆ ಹತ್ತಾರು ಯಶಸ್ವಿ ಕಾರ್ಯಕ್ರಮ ಮಾಡಿ 15 ಕೋಟಿಗೂ ಅಧಿಕ ದುಡ್ಡ ಕಳೆದುಕೊಂಡಿದ್ದೇವೆ.
ಆದರೆ ಯಾರೋ ಬಂದು 25 ಕೋಟಿ ದುಡ್ಡು ಕೊಟ್ಟರೆ ಅವರಿಗೆ ಟಿಕೇಟ್ ನೀಡಿದರೆ ಹೇಗೆ ಅವರು ಇನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದಿಲ್ಲ ಎಂದು ಹೇಳಿದರು.
ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಟೀಕೆಟ್ ಕೊಡದಿದ್ದರೆ , ನಮ್ಮೊಳಗೆ ಒಬ್ಬರನ್ನು ಕಣಕ್ಕಿಳಿಸುವುದಾಗಿ ಸ್ಪಷ್ಟಪಡಿಸಿದರು.
ಧಾರವಾಡಕ್ಕೆ ಶಾಸಕ ಅರವಿಂದ ಬೆಲ್ಲದ ಹಾಗೂ ಅವರ ಅಪ್ಪನ ಕೊಡುಗೆ ಏನು.ಇಷ್ಟು ವರ್ಷ ಜನರಿಗೆ ಸಿಗದೆ ಈಗ ಹಿನ್ನೋಟ ಮುನ್ನೋಟ ಏತಕ್ಕೆ. 10ಸಾವಿರ ಮನೆ ಎಲ್ಲಿವೆ, ಪೂಜೆ ಮಾಡಿದ ರಸ್ತೆಗಳು ಎಲ್ಲಿವೆ ಎಂದು ಕಿಡಿಕಾರಿದರು.
ಮೋಹನ ಲಿಂಬಿಕಾಯಿಯಿಂದ ಧಾರವಾಡಕ್ಕೆ ಹಾಗೂ ಲಿಂಗಾಯತ
ಸಮಾಜಕ್ಕೆ ಕೊಡುಗೆ ಎಂಬುದನ್ನು ವರಿಷ್ಠರು ಗಮನಿಸಬೇಕು. ನಾವು ಅದನ್ನು ಮನವರಿಕೆ ಮಾಡುವ ವಿಶ್ವಾಸವಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ದೀಪಕ ಚಿಂಚೋರೆ, ಮಯೂರ ಮೋರೆ, ಬಸವರಾಜ ಕಿತ್ತೂರ, ಉಪಸ್ಥಿತರಿದ್ದರು.