ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡ ವಿಧಾನ ಸಭಾ ಕ್ಷೇತ್ರ-71ರ ಪ್ರತಿಯೊಂದು ಸಮಸ್ಯೆ, ಜನತೆಯಿಂದ ಅಂತರ ಕಾಯ್ದುಕೊಂಡ ಪರಿಣಾಮ ಜನಪ್ರಿಯತೆ ಹಾಗೂ ವರ್ಚಸ್ಸು ಕಳೆದುಕೊಂಡ ಶಾಸಕ ಅಮೃತ ದೇಸಾಯಿಯವರ ಬದಲಿಗೆ ಯಾರಿಗೆ ಪಕ್ಷದ ಟಿಕೇಟ್ ನೀಡಿದರೂ ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಹೊರಲು ಸಿದ್ದ ಎಂದು ಬಿಜೆಪಿ ಟಿಕೇಟ್ ಆಕಾಂಕ್ಷಿಗಳು ಒಕ್ಕೂರಿಲಿನ ಮಂತ್ರ ಜಪಿಸಿದ್ದಾರೆ.
ಧಾರವಾಡದ ಹಿರಿಯ ಬಿಜೆಪಿ ನಿಷ್ಟಾವಂತ ಕಾರ್ಯಕರ್ತರ ಒತ್ತಾಸೆ ಮೇರೆಗೆ ಔಪಚಾರಿಕ ಸಭೆ ನಡೆದಿದೆ ಎನ್ನಲಾಗಿದೆ.
ಶನಿವಾರ ಸಂಜೆ ಧಾರವಾಡದ
ಮಾಜಿ ಶಾಸಕಿ ಸೀಮಾ ಮಸೂತಿ ಮನೆಯಲ್ಲಿ ಈ ಸಭೆ ನಡೆದಿದೆ.
ಸಭೆಯಲ್ಲಿ ಮಾಜಿ ಶಾಸಕಿ ಸೀಮಾ ಅಶೋಕ ಮಸೂತಿ,
ಬಯಲು ಸೀಮೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತವನಪ್ಪ ಅಷ್ಟಗಿ, ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ಟಿಕೇಟ್ ಆಕಾಂಕ್ಷಿ ವೀರಯ್ಯ ಚಿಕ್ಕಮಠ ಸೇರಿದಂತೆ ಅನೇಕ ಹಿರಿಯ ಕಾರ್ಯಕರ್ತರು ಪಾಲ್ಗೊಂಡಿದ್ದರು.
ನಾನಾ ಮುಖಂಡರ ಒತ್ತಡ ಹಾಗೂ ಮನವಿ ಮೇರೆಗೆ ಕೊನೆ ಕ್ಷಣದಲ್ಲಿ ಸಾಮಾಜಿಕ ಕಾರ್ಯಕರ್ತ ಬಸವರಾಜ ಕೊರವರ ಸಹ ಸಭೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು.
ಪಕ್ಷಕ್ಕಿಂತ ವ್ಯಕ್ತಿ ಮುಖ್ಯವಲ್ಲ. ಮೊದಲು ಪಕ್ಷ ಹಿತದೃಷ್ಟಿಯಿಂದ ಎಲ್ಲರೂ ಸೇರಿ ಒಮ್ಮತದ ನಿರ್ಧಾರಕ್ಕೆ ಬಂದು ಅವರನ್ನು ಹೊರತುಪಡಿಸಿ ಐವರಲ್ಲಿ ಯಾರಿಗೆ ಬೇಕಾದರೂ ಅಥವಾ ಸಾಮಾನ್ಯ ಕಾರ್ಯಕರ್ತನಿಗೂ ಟಿಕೇಟ್ ಸಿಕ್ಕರೂ ಪಕ್ಷಕ್ಕಾಗಿ ದುಡಿಯಲು ಸಿದ್ದ ಎಂದು ಹೇಳಿದ್ದಾರೆ.
ಒಂದು ವೇಳೆ ತವನಪ್ಪ ಅಷ್ಟಗಿ, ಸೀಮಾ ಮಸೂತಿ, ಸವಿತಾ ಅಮರಶೆಟ್ಟಿ, ಚಿಕ್ಕಮಠ ಹಾಗೂ ಬಸವರಾಜ ಕೊರವರ ಅವರಿಗೆ ಟಿಕೇಟ್ ಸಿಗದೆ ಹಾಲಿ ಶಾಸಕರಿಗೆ ಮತ್ತೆ ಮಣೆ ಹಾಕಿದರೆ ಸಾಮಾಜಿಕ ಕಾರ್ಯಕರ್ತ ಬಸವರಾಜ ಕೊರವರ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಬಸವರಾಜ ಕೊರವರ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಲಾಗಿದೆ.
ಇದೇ ವೇಳೆ ತವನಪ್ಪ ಅಷ್ಟಗಿ, ಸೀಮಾ ಮಸೂತಿ, ಸವಿತಾ ಅಮರಶೆಟ್ಟಿ ವೀರಯ್ಯ ಚಿಕ್ಕಮಠ ಪಕ್ಷದ ಚೌಕಟ್ಟಿನಲ್ಲಿದ್ದರೆ, ಸಾಮಾಜಿಕ ಹೋರಾಟಗಾರ ಬಸವರಾಜ ಕೊರವರ ಪಕ್ಷದ ಪ್ರಾಥಮಿಕ ಸದಸ್ಯರಲ್ಲ.ಹೀಗಾಗಿ ಅವರು ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೂ ಪಕ್ಷದ ಕಾರ್ಯಕರ್ತರ, ಮುಖಂಡರ ಹಾಗೂ ಸಂಘದ ಮುಖಂಡರ ಆಯ್ಕೆ ಪಟ್ಟಿಯಲ್ಲಿ ಬಸವರಾಜ ಕೊರವರ ಹೆಸರು ಪದೆ ಪದೇ ಮುಂಚೂಣಿಗೆ ಬಂದಿರುವುದರಿಂದ ಅವರು ಈ ಸಭೆಯಲ್ಲಿ ಪಾಲ್ಗೊಂಡಿದ್ದು ತೀವ್ರ ಕುತೂಹಲ ಕೆರಳಿಸಿದೆ.
ಪಕ್ಷ ಈಗಲಾದರೂ ಹಾಲಿಗೆ ಮನ್ನಣೆ ನೀಡುತ್ತಾ ಅಥವಾ ಹೊಸಬರಿಗೆ ಆದ್ಯತೆ ಕೊಡುತ್ತಾ ಎಂಬುದು ಬರುವ ದಿನಗಳಲ್ಲಿ ಕಾದು ನೋಡಬೇಕು.