ನವದೆಹಲಿ ಪ್ರಜಾಕಿರಣ.ಕಾಮ್ : ಮುಖ್ಯಮಂತ್ರಿ, ಮಂತ್ರಿ, ವಿರೋಧ ಪಕ್ಷದ ನಾಯಕ ಸ್ಥಾನ, ಬಿಜೆಪಿ ರಾಜ್ಯಾಧ್ಯಕ್ಷ ಹೀಗೆ ಹಲವು ಹುದ್ದೆಗೆ ಹೆಸರು ಕೇಳಿ ಬಂದಿದ್ದ ಧಾರವಾಡ ಪಶ್ಚಿಮ ಬಿಜೆಪಿ ಶಾಸಕ ಅರವಿಂದ ಬೆಲ್ಲದಗೆ ಕೊನೆಗೂ ಇದೀಗ ರಾಜ್ಯದ ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಸ್ಥಾನ ದೊರೆತಿದೆ.
ಬಿಜೆಪಿ ಹೈಕಮಾಂಡ್ ಇಂದು ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಧಾರವಾಡ ಜಿಲ್ಲೆಯ ಲಿಂಗಾಯತ ಶಾಸಕ ಅರವಿಂದ ಬೆಲ್ಲದಗೂ ಸ್ಥಾನಮಾನ ನೀಡಲಾಗಿದೆ.
ಕಳೆದ ಹಲವು ವರ್ಷಗಳಿಂದ ಭಾರತೀಯ ಜನತಾ ಪಕ್ಷದಿಂದ ಏನಾದರೂ ಆಗಿಯೇ ಆಗುತ್ತೇನೆ ಎಂದು ಯಡಿಯೂರಪ್ಪ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದ ಶಾಸಕ ಅರವಿಂದ ಬೆಲ್ಲದ್ ಅವರನ್ನ ಕೊನೆಗೂ ಬಿಜೆಪಿ ವಿಧಾನಸಭೆ ವಿರೋಧ ಪಕ್ಷದ ಉಪನಾಯಕರನ್ನಾಗಿ ಮಾಡಿ ಆದೇಶ ಹೊರಡಿಸಿರುವುದು ಅವರ ಬೆಂಬಲಿಗರಿಗೆ ಸಂತಸ ತಂದಿದೆ.
ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಸೂಚನೆ ಮೇರೆಗೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರನ್ನಾಗಿ ಕೋಟಾ ಶ್ರೀನಿವಾಸ ಪೂಜಾರಿ, ಉಪನಾಯಕರಾಗಿ ಸುನೀಲ್ ವಲ್ಯಾಪುರೆ, ಅವರನ್ನ ನೇಮಕ ಮಾಡಲಾಗಿದೆ. ವಿಧಾನ ಪರಿಷತ್ ಮುಖ್ಯ ಸಚೇತಕರನ್ನಾಗಿ ಎನ್.ರವಿಕುಮಾರ
ಮತ್ತು ವಿಧಾನ ಸಭೆ ಮುಖ್ಯ ಸಚೇತಕರಾಗಿ ದೊಡ್ಡನಗೌಡ ಜಿ. ಪಾಟೀಲ ಅವರನ್ನು ನೇಮಿಸಲಾಗಿದೆ ಎಂದು
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.