ಬೆಂಗಳೂರು prajakiran.com : ರಾಜ್ಯದ ವಿವಿಧ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಲಕ್ಷಾಂತರ ಶಿಕ್ಷಕಿಯರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಗುರುವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಕೆ. ಜೆ. ಜಗದೀಶ ಸೇರಿದಂತೆ ವಿವಿಧ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.
ಭಾರತದ ಪ್ರಥಮ ಶಿಕ್ಷಕಿ ಮಾತೆ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆಯನ್ನು ಜನವರಿ 3 ರಂದು ಮಾತೆ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ದಿನಾಚರಣೆ ಎಂದು ಆಚರಿಸಲು ಆದೇಶ, 2006 ರ ನಂತರ ನೇಮಕವಾದ ಎಲ್ಲರಿಗೂ ಎನ್. ಪಿ. ಸ್ ಯೋಜನೆಯನ್ನು ರದ್ದುಮಾಡಿ ಹಳೇ ಯ ಪಿಂಚಣಿ ಯೋಜನೆ ಜಾರಿಗೊಳಿಸಬೇಕು.
ಎಲ್ಲ ಗುರುವೃಂದಕ್ಕೆ ಏಕಕಾಲದಲ್ಲಿ ಅನುದಾನ ಬಿಡುಗಡೆ, ಮುಂಬಡ್ತಿಗಳನ್ನು ಪ್ರತಿವರ್ಷ ಕಡ್ಡಾಯವಾಗಿ ಮಾಡಲು ಸೂಚಿಸಬೇಕು. ಅನುದಾನಿತ ಪ್ರಾಥಮಿಕ ಶಾಲಾ ಗುರುವೃಂದಕ್ಕೆ ಜ್ಯೋತಿ ಸಂಜೀವಿನಿ ಮಂಜೂರು ಮಾಡಬೇಕು.
ಸರಕಾರಿ ಪ್ರಾಥಮಿಕಶಾಲೆ ಮುಖ್ಯೋಪಾಧ್ಯಾಯರಿಗೆ ಸಿಗುತ್ತಿರುವ ವೇತನ ಬಡ್ತಿ ಅನುದಾನಿತ ಶಾಲಾ ಮುಖ್ಯೋಪಾಧ್ಯಾಯರಿಗೂ ಸೇರಿಸಬೇಕು. ಅನುದಾನಿತ ಪ್ರಾಥಮಿಕ ಶಾಲಾ ಗುರು ವೃಂದಕ್ಕೂ ಕಾಲ್ಪನಿಕ ವೇತನ ಮಂಜೂರು ಮಾಡಬೇಕು.
ಸರಕಾರಿ ಶಾಲೆಗಳಿಗೆ ಕಂಪ್ಯೂಟರ್ ಹಾಗೂ ಇಂಟರ್ನೆಟ್ ವ್ಯವಸ್ಥೆ ಹಾಗೂ ಕಂಪ್ಯೂಟರ್ ಆಪರೇಟರನ್ನು ನೇಮಿಸಿ, ಪ್ರತಿಯೊಂದು ಸರಕಾರಿ ಶಾಲೆಗಳಿಗೆ ಒಂದು ಸ್ಮಾರ್ಟ್ ಕ್ಲಾಸ ಮಂಜೂರು ಮಾಡಿ ಎಂದರು.
ರಾಜ್ಯ ಮಟ್ಟದಲ್ಲಿ ಶಿಕ್ಷಕಿಯರ ರಕ್ಷಣಾ ಸಮಿತಿ ರಚಿಸಿ, ಪ್ರತಿ ಜಿಲ್ಲೆಯಲ್ಲಿ ಉಪನಿರ್ದೇಶಕರ ಕಚೇರಿಯಲ್ಲಿ ಲೈಂಗಿಕ ದೂರು ನಿವಾರಣಾ ಸಮಿತಿ, ಶಿಕ್ಷಕಿಯರಿಗೆ ಪ್ರತಿವರ್ಷ ಮಾತೆ ಸಾವಿತ್ರಿಬಾಯಿ ಪುಲೆ ಹೆಸರಿನಲ್ಲಿ ಪ್ರಶಸ್ತಿ, ಗ್ರಾಮೀಣ ಕೃಪಾಂಕ ಶಿಕ್ಷಕರ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಕೋರಿದರು.
ಪ್ರತಿ ಶಾಲೆಯಲ್ಲಿ ಶಾಲೆಗೆ ಒಬ್ಬ ಗುಮಾಸ್ತ, ಕಂಪ್ಯೂಟರ್ ಆಪರೇಟರ್, ಸಿಪಾಯಿ ಹುದ್ದೆ ಒದಗಿಸಬೇಕು. ಶಿಕ್ಷಕಿಯರಿಗೆ ಚುನಾವಣಾ ಕಾರ್ಯಕ್ಕೆ ಅದೇ ತಾಲೂಕಿನಲ್ಲಿ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಬೇಕು. ಶೇ. 25% ಖಾಲಿ ಹುದ್ದೆ ಇರುವ ತಾಲೂಕಿನ ಶಿಕ್ಷಕರು ವರ್ಗಾವಣೆಗೆ ಒಳಪಡುವುದಿಲ್ಲ ಎಂಬುದನ್ನು ಕೈಬಿಡಬೇಕು.
ಶಾಲೆಗೆ ಸುಣ್ಣ–ಬಣ್ಣ ಮಾಡಿಸಲು ಪ್ರತ್ಯೇಕ ಅನುದಾನ ಬಿಡುಗಡೆ, ಸರ್ಕಾರಿ ಶಾಲೆಯಲ್ಲಿನ ಎಲ್ಲಾ ಮಕ್ಕಳಿಗೂ ಆಸನದ ವ್ಯವಸ್ಥೆ ಕಲ್ಪಿಸಿ ಎಂದರು.
ಶಿಕ್ಷಕರ ಬಾಕಿ ವೇತನ ನೀಡಿ ಸೇವಾ ಹಿರಿತನ, ವಿಕಲಚೇತನ ಶಿಕ್ಷಕಿಯರಿಗೆ ವಾಹನ ಖರೀದಿ ಮಾಡಲು ಬಡ್ಡಿರಹಿತ ಸಾಲವನ್ನು ನೀಡುವುದು.
ಶಿಕ್ಷಕಿಯರ ಮಾರಣಾಂತಿಕ ಕಾಯಿಲೆಗೆ ಒಳಪಟ್ಟ ಶಸ್ತ್ರಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆಯನ್ನು ಪಡೆಯುತ್ತಿದ್ದರೆ ವಿಶೇಷ ರಜೆ, ಗರ್ಭಿಣಿ ಹಾಗೂ ಒಂದು ವರ್ಷದೊಳಗೆ ಸಣ್ಣ ಮಕ್ಕಳಿರುವ ಶಿಕ್ಷಕಿಯರಿಗೆ ವಿವಿಧ ಸಮೀಕ್ಷಾ ಕಾರ್ಯಗಳಿಂದ ವಿನಾಯತಿ ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷೆ ಲತಾ ಮುಳ್ಳೂರ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುಳಾ ಬಿ, ರಾಜ್ಯ ಸಂಘಟನಾ ಕಾರ್ಯದರ್ಶಿ ರೂಪ, ರಾಜ್ಯ ಉಪಾಧ್ಯಕ್ಷೆ ಚಿತ್ರ, ರಾಜ್ಯ ಸಂಘಟನಾ ಕಾರ್ಯದರ್ಶಿ ಪುನಿತ ನಟರಾಜ, ರಾಜ್ಯ ಸಂಘಟನಾ ಕಾರ್ಯದರ್ಶಿ ಉಮಾದೇವಿ ಎಂ ಜಿ, ರಾಜ್ಯಸಂಘಟನಾ ಕಾರ್ಯದರ್ಶಿ ಉಪಸ್ಥಿತರಿದ್ದರು.