ಧಾರವಾಡ prajakiran.com : ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಜಾರಿಗೆ ತಂದಿರುವ ಬಿಆರ್ಟಿಎಸ್ ಯೋಜನೆ, ನೆನೆಗುದಿಗೆ ಬಿದ್ದ ಬೈ ಪಾಸ್ ನಿರ್ಮಾಣ, ಗುಜರಾತ್ ನವರಿಗೆ ಯುಜಿಡಿ ಕಾಮಗಾರಿ ಹೀಗೆ ಅನೇಕ ಯೋಜನೆಗಳು ಅಧಿಕಾರಿ ವರ್ಗ ಹಾಗೂ ಜನಪ್ರತಿನಿಧಿಗಳಿಗೆ ಕಿಕ್ ಬ್ಯಾಕ್ ನೀಡುವ ಯೋಜನೆಗಳಾಗಿವೆ ಹೊರತು ಜನರಿಗೆ ಉಪಯೋಗವಾಗಿಲ್ಲ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಆರೋಪಿಸಿದರು.
ಅವರು ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುಮಾರು 600 ಕೋಟಿ ರೂ. ವೆಚ್ಚದಲ್ಲಿದ್ದ ಈ ಯೋಜನೆ ಸಿದ್ಧವಾಗಿದ್ದು, ಅದು 1200 ಕೋಟಿ ರೂ. ದಾಟಿದರೂ ಇನ್ನೂ ಅಪೂರ್ಣವಾಗಿದೆ.
ಹಲವಡೆ ಕಳಪೆ ಕಾಮಗಾರಿಯಾಗಿದೆ ಎಂದು ಸ್ವತಃ ಅವರ ಪಕ್ಷದ ಶಾಸಕ ಅರವಿಂದ ಬೆಲ್ಲದ ದೂರಿದ್ದಾರೆ ಎಂದರು. ನಾಲ್ಕು ವರ್ಷ ಕಳೆದರೂ ಅವರ ಮನೆಯ ಮುಂದಿನ ಟೆಂಡರ್ ಶ್ಯೂರ್ ರಸ್ತೆ ಇನ್ನೂ ಪೂರ್ಣಗೊಂಡಿಲ್ಲ.
ಶಾಸಕ ಅರವಿಂದ ಬೆಲ್ಲದ ಅವರು ಬಿಆರ್ಟಿಎಸ್ ಯೋಜನೆ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿರುವುದು ನೋಡಿದರೆ ಅವರ ಮೇಲೆ ನಮಗೆ ಕನಿಕರವಾಗುತ್ತಿದೆ. ಒಂದು ವೇಳೆ ಅವರು ಹೋರಾಟಕ್ಕೆ ಮುಂದಾದರೆ ಅವರಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.
ಬಿಆರ್ಟಿಎಸ್ ಯೋಜನೆ ಮೂಲನಕ್ಷೆ ಪ್ರಕಾರ ನಡೆದಿಲ್ಲ. ಮಳೆಯಾದರೆ ಸಾಕು ಟೋಲ್ನಾಕಾದಲ್ಲಿ ನೀರು ನಿಲ್ಲುತ್ತದೆ. ಮಳೆ ನೀರು ಸಂಗ್ರಹಗೊಂಡು ಸಂಚಾರ ವ್ಯವಸ್ಥೆ ಹದಗೆಡುತ್ತಿದೆ.
ಈ ಸಮಸ್ಯೆಯನ್ನು ಇನ್ನೆರಡು ತಿಂಗಳೊಳಗಾಗಿ ಬಗೆಹರಿಸದಿದ್ದರೆ ಬಿಆರ್ಟಿಎಸ್ ವಾಪಾಸ್ಸು ಹೋಗುವರೆಗೆ ಹೋರಾಟ ಕೈಗೆತ್ತಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.
ಧಾರವಾಡ ಜಿಲ್ಲಾಡಳಿತಕ್ಕೆ ರಾಜ್ಯ ಸರಕಾರ ಕೋವಿಡ್ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ವಲಸೆ ಕಾರ್ಮಿಕರ ನೆರವಿಗೆ ನೀಡಿದ ಕಾರ್ಮಿಕರ ಕಿಟ್ ಬಿಜೆಪಿಕಾರ್ಯಕರ್ತರ ಪಾಲಾದರೂ ಮೌನ ವಹಿಸಿದೆ. ಬಿಜೆಪಿ ಶಾಸಕರು ಜನರಿಗೆ ಸರಿಯಾಗಿ ಸ್ಪಂದಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧಾರವಾಡ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರಿಗೆ ಆಡಳಿತ ಹೇಗೆ ನಡೆಸಬೇಕು ಎಂಬುದು ತಿಳಿದಿಲ್ಲ. ಹೀಗಾಗಿ ಅವರು ಕೂಡಲೇ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಧಾರವಾಡ ಜಿಲ್ಲೆಯಾದ್ಯಂತ ಸಾಕಷ್ಟು ಬಡವರು ತೊಂದರೆಗೆ ಒಳಗಾದರೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಮಾತ್ರ ಈವರೆಗೆ ಎಲ್ಲೂ ಪತ್ತೆಯಾಗಿಲ್ಲ. ಲಾಕ್ಡೌನ್ ಮುಗಿದರೂ ಈವರೆಗೆ ಕ್ಷೇತ್ರಕ್ಕೆ ಕಾಲಿಟ್ಟಿಲ್ಲ.
ಜನ ಸಂಕಷ್ಟದಲ್ಲಿದ್ದರೂ ಯಾರಿಗೂ ದಾನದ ರೂಪದಲ್ಲಿ ಸಹಾಯ ಮಾಡಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಕಾಣಿಸಿಕೊಳ್ಳುವ ಅವರು ಕೇಂದ್ರ ಸಚಿವರಾಗಿ ಧಾರವಾಡ ಕ್ಷೇತ್ರಕ್ಕೆ ಏನೂ ಮಾಡದೇ ಇರುವುದು ನೋವಿನ ಸಂಗತಿ ಎಂದು ಹರಿಹಾಯ್ದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ದಾನಪ್ಪ ಕಬ್ಬೇರ, ಬಸವರಾಜ ಮಲಕಾರಿ, ಪ್ರಕಾಶ ಹಳ್ಯಾಳ ಉಪಸ್ಥಿತರಿದ್ದರು.