ಆಸ್ತಿಗಾಗಿ ಬೆಳ್ಳಂಬೆಳಿಗ್ಗೆ ಧಾರವಾಡದಲ್ಲಿ ಹರಿಯಿತು ನೆತ್ತರು..!
ಧಾರವಾಡ ಪ್ರಜಾಕಿರಣ.ಕಾಮ್ : ನಿನ್ನೆಯಷ್ಟೇ ಧಾರವಾಡದ ಹೊರವಲಯದಲ್ಲಿ ನಡೆದ ಕೊಲೆಯಿಂದ ಬೆಚ್ಚಿಬಿದ್ದಿದ್ದ ವಿದ್ಯಾಕಾಶಿಯಲ್ಲಿ, ಇಂದು ಬೆಳ್ಳಂಬೆಳಿಗ್ಗೆ ನೆತ್ತರು ಹರಿದಿದೆ.
ಬೆಳಗಿನ ಜಾವ ದೇವಸ್ಥಾನಕ್ಕೆ ಹೊರಟಿದ್ದ ವೃದ್ಧೆಯನ್ನು ವಿಠ್ಠಲ ದೇವಸ್ಥಾನದ ಪಕ್ಕದಲ್ಲೇ ಕೊಚ್ಚಿ ಕೊಲೆ ಮಾಡಲಾಗಿದೆ.
ಹೀಗೆ ರಕ್ತದ ಮಡುವಿನಲ್ಲಿ ಬಿದ್ದಿರುವ ಈ ಮಹಿಳೆ ಹೆಸರು ಕರೆವ್ವ ಇರಬಗೇರಿ. ಗಂಡ ಹಾಗೂ ಮಗನನ್ನು ಕಳೆದುಕೊಂಡಿದ್ದ ಈಕೆ ನವಲೂರಿನ ತನ್ನ ಸಂಬಂಧಿಕರ ಮನೆಯಲ್ಲಿ ವಾಸ ಮಾಡುತ್ತಿದ್ದಳು.
ನವಲೂರು ಈಕೆಯ ಗಂಡನ ಊರು. ಗಂಡ ಹಾಗೂ ಮಗನನ್ನು ಕಳೆದುಕೊಂಡ ಈಕೆಗೆ ನವಲೂರಿನಲ್ಲಿ 6 ಎಕರೆ ಜಮೀನು ಇತ್ತು.
ಇದೇ ವಿಷಯವಾಗಿ ಈಗ ಈಕೆಯ ಬರ್ಬರ ಹತ್ಯೆ ನಡೆದಿದೆ ಎಂಬುದು ಕರೆವ್ವಳ ಸಂಬಂಧಿಕರ ಆರೋಪ.
ಕರೆವ್ವ ಅಪ್ಪಟ ದೈವ ಭಕ್ತಿ. ನವಲೂರಿನ ವಿಠಲ ಮಂದಿರಕ್ಕೆ ದೇಣಿಗೆ, ಪಂಡರಪುರದ ಆಶ್ರಮಕ್ಕೆ ದೇಣಿಗೆ ಹೀಗೆ ದಾನ, ಧರ್ಮ ಮಾಡಿದ್ದಳು.
ತನಗೆ ಯಾರೂ ಇಲ್ಲದ್ದರಿಂದ ತನ್ನ ಸಂಬಂಧಿಕರ ಮನೆಯಲ್ಲೇ ಕರೆವ್ವ ಜೀವನ ನಡೆಸುತ್ತಿದ್ದಳು. ಆಕೆಯ ಗಂಡನಿಂದ ಬಂದಿದ್ದ ಆರು ಎಕರೆ ಜಮೀನು ಈಗ ಆಕೆಯ ಜೀವವನ್ನೇ ಬಲಿ ಪಡೆದುಕೊಂಡಿದೆ.
ಜಮೀನು ವಿಚಾರವಾಗಿ ಕರೆವ್ವಳ ಸಂಬಂಧಿಕರು ಮತ್ತು ಆಕೆಯ ನಡುವೆ ಆಗಾಗ ಗಲಾಟೆ ನಡೆಯುತ್ತಲೇ ಇತ್ತು.
ಈ ವಿಷಯ ರಾಜಿ ಸಂಂಧಾನದ ಮೂಲಕವೂ ಬಗೆಹರಿದಿತ್ತು. ಆದರೆ, ಈಗ ಆ ಜಮೀನಿನ ಸಲುವಾಗಿ ಕರೆವ್ವಳನ್ನು ಆಕೆಯ ಸಂಬಂಧಿಕರೇ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಇನ್ನು ನವಲೂರಿನಲ್ಲಿ ಕರೆವ್ವ ಇದ್ದ ಸಂಬಂಧಿಕರ ಮನೆ ಮುಂದೆ ಜನಸ್ತೋಮ ಸೇರಿತ್ತು.
ಘಟನಾ ಸ್ಥಳಕ್ಕೆ ವಿದ್ಯಾಗಿರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ.
ಕರೆವ್ವಳನ್ನು ಹತ್ಯೆ ಮಾಡಿದ ಆರೋಪಿಗಳ ಪತ್ತೆಗಾಗಿ ಇದೀಗ ಪೊಲೀಸರು ಜಾಲ ಬೀಸಿದ್ದಾರೆ.
ಕಳೆದ ಮೂರು ದಿನಗಳ ಅವಧಿಯಲ್ಲಿ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೇ ಮೂರು ಹತ್ಯೆಗಳಾಗಿರುವುದು ವಿಪರ್ಯಾಸ.