ಬಿಳಿಗಿರಿ ಶ್ರೀನಿವಾಸ
ಚಾಮರಾಜನಗರ Prajakirana.com: ಜಮೀನಿನಲ್ಲಿ ಹಾದು ಹೋಗಿದ್ದ ಹೈಟೆನ್ಷನ ವಿದ್ಯುತ್ ತಂತಿಗೆ ಸಿಲುಕಿ ರೈತನೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ತಾಲೂಕಿನ ಕಾಳನಹುಂಡಿ ರಸ್ತೆಯ ಕಟ್ಟೇಪುರ ಬಳಿಯ ಜಮೀನೊಂದರಲ್ಲಿ ನಡೆದಿದೆ.
ಭಾನುವಾರ ರಾತ್ರಿ 9.30ರ ಸುಮಾರಿಗೆ ವೇಲುಸ್ವಾಮಿ (55) ಎಂಬ ರೈತ ಜಮೀನಿನಲ್ಲಿ ನೀರು ಎತ್ತುವ ಮೋಟಾರ್ ಸ್ವಿಚ್ ಆನ್ ಮಾಡಲು ಹೋಗಿದ್ದಾರೆ.
ಪಕ್ಕದಲ್ಲೇ ಹಾದುಹೋಗಿರುವ 11 ಕೆವಿ ವಿದ್ಯುತ್ ತಂತಿ ತುಂಡಾಗಿ ನೇತಾಡುತ್ತಿತ್ತು.
ಕತ್ತಲೆಯಲ್ಲಿ ಇದನ್ನು ಗಮನಿಸದ ಅವರ ತಲೆಗೆ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಮೀನುಗಳಲ್ಲಿ ಹಾದು ಹೋಗಿರುವ ಹೈಟೆನ್ಷನ್ ವಿದ್ಯುತ್ ತಂತಿಗಳು ನೇತಾಡುತ್ತಿದ್ದರೂ ಅದನ್ನು ನಿರ್ವಹಣೆ ಮಾಡದ ಕಾರಣ ಇಂಥ ಅವಘಡಗಳು ಸಂಭವಿಸುತ್ತಿವೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಘಟನೆಗೆ ಕಾರಣರಾದವರ ವಿರುದ್ದ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಮೃತ ರೈತನ ಕುಟುಂಬಕ್ಕೆಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.