ಚಾಮರಾಜನಗರ Prajakiran.com : ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಎಚ್. ಮೂಕಹಳ್ಳಿ ಗ್ರಾಮದಲ್ಲಿ ಇಂದು ನಡೆದಿದೆ.
ಗ್ರಾಮದ ಮಹದೇವಪ್ಪ (47), ಮಂಗಳಮ್ಮ (40), ಮಕ್ಕಳಾದ ಜ್ಯೋತಿ (14), ಶ್ರುತಿ (12) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆ ಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕಡು ಬಡತನ, ಸಾಲಬಾಧೆಯಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.
ಗ್ರಾಮದವರೊಬ್ಬರು ಇಂದು ಬೆಳಿಗ್ಗೆ ಮಹಾದೇವಪ್ಪ ಅವರನ್ನು ಕೆಲಸದ ನಿಮಿತ್ತ ಕರೆಯಲು ಹೋದಾಗ ಬಾಗಿಲು ತೆರೆಯಲಿಲ್ಲ.
ಮನೆಯೊಳಗಿನಿಂದ ಯಾವುದೇ ಶಬ್ದ ಬರಲಿಲ್ಲ. ಆಗ ಮನೆಯ ಮೇಲೆ ಹತ್ತಿ ಹೆಂಚು ತೆರೆದು ನೋಡಿದಾಗ, ನಾಲ್ವರೂ ನೇಣು ಹಾಕಿಕೊಂಡಿರುವುದು ಬೆಳಕಿಗೆ ಬಂದಿದೆ.
ಮಹಾದೇವಪ್ಪ ಅವರಿಗೆ ಮೂವರು ಪುತ್ರಿಯರಿದ್ದು, ಹಿರಿಯ ಪುತ್ರಿಗೆ ವಿವಾಹವಾಗಿದೆ. ಪೂರ್ವ ಠಾಣೆ ಪೊಲೀಸರು ಈಗ ಸ್ಥಳಕ್ಕೆ ಭೇಟಿ ನೀಡಿದ್ದಾರೆ.