ರೌಡಿಶೀಟರ್ ಫ್ರೂಟ್ ಇರ್ಫಾನ್ ಶೂಟೌಟ್ ಪ್ರಕರಣದ ತನಿಖೆ ಮತ್ತಷ್ಟು ಚುರುಕು
ಹುಬ್ಬಳ್ಳಿ prajakiran.com : ಧಾರವಾಡದ ನಟೋರಿಯಸ್ ರೌಡಿಶೀಟರ್ ಫ್ರೂಟ್ ಇರ್ಫಾನ್ ಶೂಟೌಟ್ ಪ್ರಕರಣದ ತನಿಖೆಯನ್ನು ಹುಬ್ಬಳ್ಳಿ ಪೊಲೀಸರು ಮತ್ತಷ್ಟು ಚುರುಕುಗೊಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಕರೆತಂದು ವಿಚಾರಣೆ ನಡೆಸಿರುವ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಆರ್. ದಿಲೀಪ್ ಮಾರ್ಗದರ್ಶನದಲ್ಲಿ ಡಿಸಿಪಿ ಪಿ. ಕೃಷ್ಣಕಾಂತ, ಹಳೆ ಹುಬ್ಬಳ್ಳಿ ಪೊಲೀಸ ಇನ್ಸಪೆಕ್ಟರ್ ಶಿವಾನಂದ ಕಮತಗಿ, ಕೊಲೆಯ ಸೂತ್ರದಾರಿ ಎನ್ನಲಾದ ಭೂಗತ ಲೋಕದ ಪಾತಕಿ ಸೈಯದ್ ಸುಲೇಮಾನ್ ಬಚ್ಚಾಖಾನ್ ನನ್ನ ನಿನ್ನೆಯಿಂದಲೇ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಬೆಂಗಳೂರಿನ ಬಿಲ್ಡರ್ ಸುಬ್ಬರಾಜು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಸದ್ಯ ಮೈಸೂರು ಜೈಲಿನಲ್ಲಿದ್ದ ಸೈಯ್ಯದ್ ಸುಲೇಮಾನ ಬಚ್ಚಾಖಾನ ನನ್ನ ಐದು ದಿನಗಳ ಮಟ್ಟಿಗೆ ವಶಕ್ಕೆ ಪಡೆದು ಹುಬ್ಬಳ್ಳಿಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ.
ಸೈಯದ್ ಇರ್ಫಾನ್ ಹಂಚಿನಾಳ ಅಲಿಯಾಸ್ ಪ್ರೂಟ್ ಇರ್ಪಾನ್ ಕೊಲೆಯಲ್ಲಿ ಈತನ ಪಾತ್ರದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಉನ್ನತ ಪೊಲೀಸ್ ಮೂಲಗಳು ಪ್ರಜಾಕಿರಣ.ಕಾಮ್ ಗೆ ಖಚಿತಪಡಿಸಿವೆ.
ಈ ಶೂಟೌಟ್ ಪ್ರಕರಣದಲ್ಲಿ ಈಗಾಗಲೇ ಮುಂಬೈನ ಮೂರು ಜನ ಶೂಟರ್ ಗಳನ್ನ ಸೇರಿದಂತೆ ಒಟ್ಟು 11 ಜನರನ್ನ ಬಂಧಿಸಿಲಾಗಿದ್ದು, ಅವರ ವಿಚಾರಣೆ ವೇಳೆ ಬಚ್ಚಾಖಾನ್ ಹೆಸರು ಬಾಯ್ಬಿಟ್ಟ ಹಿನ್ನೆಲೆಯಲ್ಲಿ ಮೈಸೂರ ಜೈಲಿನಿಂದ ಬಚ್ಚಾಖಾನ್ ನನ್ನ ಹುಬ್ಬಳ್ಳಿಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ.
ಬಂಧಿತರಲ್ಲಿ ಇಬ್ಬರು ಆರೋಪಿಗಳು ಮೈಸೂರಿನ ಮೂಲದವರಾಗಿದ್ದರೆ, ಮುಂಬೈನ ಮಾಮಾ, ನೇಪಾಳಿ ರಾಜು ಹಾಗೂ ಗ್ಯಾಂಗ್ ನ ಮೂವರು ಮತ್ತು ಧಾರವಾಡ ಮಣಕೀಲ್ಲಾ ನಿವಾಸಿ ಮೋಹಿನ್ ಪಟೇಲ್ ಕೂಡ ಬಚ್ಚಾಖಾನ್ ನತ್ತ ಬೊಟ್ಟು ಮಾಡಿದ್ದರಿಂದ ಈ ವಿಚಾರಣೆ ಭಾರೀ ಮಹತ್ವ ಪಡೆದುಕೊಂಡಿದೆ.
ರಿಯಲ್ ಎಸ್ಟೇಟ್ ಹಾಗೂ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಈ ಶೂಟೌಟ್ ನಡೆದಿದೆ ಎಂದು ಹೇಳಲಾಗಿತ್ತು.
ಈ ಸಂಬಂಧ ಹುಬ್ಬಳ್ಳಿ-ಧಾರವಾಡದ ಹಲವು ರಿಯಲ್ ಎಸ್ಟೇಟ್ ಕುಳಗಳ ವಿಚಾರಣೆಯನ್ನು ಹುಬ್ಬಳ್ಳಿ-ಧಾರವಾಡ ಪೊಲೀಸರು ನಡೆಸಿದ್ದರು.
ಕಳೆದ ಆಗಸ್ಟ್ 7 ರಂದು ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿ ರೌಡಿಶೀಟರ್ ಫ್ರೂಟ್ ಇರ್ಫಾನ್ ನನ್ನಮಗನ ವಲೀಮಾ ದಿನವೇ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.