ಕಂಗಲಾದ ಹುಬ್ಬಳ್ಳಿ-ಧಾರವಾಡದ ಜನತೆ
ಧಾರವಾಡ prajakiran.com : ಹುಬ್ಬಳ್ಳಿ-ಧಾರವಾಡ ನಡುವೆ ವೇಗವಾಗಿ ಸಂಪರ್ಕ ಕಲ್ಪಿಸುವ ಮಹತ್ವಾಂಕ್ಷಿ ಬಿ ಆರ್ ಟಿ ಎಸ್ ರಸ್ತೆ ನಿರ್ಮಾಣ ಆರಂಭದಿಂದಲೂ ಒಂದಿಲ್ಲ ಒಂದು ಯಡವಟ್ಟಿನಿಂದ ಸುದ್ದಿಯಲ್ಲಿದೆ.
ಕಳೆದ ವರ್ಷವಷ್ಟೇ ಧಾರವಾಡದ ನವಲೂರಿನ ಬ್ರಿಜ್ ಉದ್ಘಾಟನೆಗೆ ಮುನ್ನವೇ ಬಿರುಕು ಬಿಟ್ಟಿದ್ದರಿಂದ ಕೆಲ ದಿನಕಾಲ ರಸ್ತೆ ಸಂಚಾರ ಸ್ಥಗಿತಗೊಳಿಸಿ ದುರಸ್ತಿ ಕಾರ್ಯ ಕೈಗೊಳ್ಳಲಾಗಿತ್ತು.
ಈ ಬಗ್ಗೆ ಸ್ವತಃ ಧಾರವಾಡ ಪಶ್ಚಿಮ ಶಾಸಕಅರವಿಂದ ಬೆಲ್ಲದ ಅವರು ಕೂಡ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು.
ಅದರ ಬೆನ್ನಲ್ಲೇ ಇದೀಗ ನವಲೂರಿನ ಬಿ ಆರ್ ಟಿ ಎಸ್ ಬ್ರಿಜ್ ನ ಬಲ ಬದಿಯಲ್ಲಿ ಸಿಮೆಂಟ್ ದೊಡ್ಡ ಗ್ರಾತ್ರದಲ್ಲಿಯೇ ಕುಸಿದು ಬಿದ್ದಿದೆ. ಸಿಮೆಂಟ್ ಗೋಡೆಗಳು ಕೆಳಗೆ ಬಿದ್ದಿದ್ದು, ಅದರೊಳಗಿನ ಮಣ್ಣು ಸಹಅಪಾರ ಪ್ರಮಾಣದಲ್ಲಿ ಕುಸಿದಿದೆ. ಇದು ಸ್ಥಳೀಯ ಜನತೆಯ ನಿದ್ದೆಗೆಡಿಸಿದೆ.
ಈ ಬಗ್ಗೆ ನಾವು ಹಲವು ಬಾರಿ ದೂರಿದರೂ ಯಾರೊಬ್ಬರು ಸ್ಪಂದಿಸಿಲ್ಲ. ಈಗಅದರ ದುಸ್ಥಿತಿ ನೀವೆ ನೋಡಿ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿ ಆರ್ ಟಿ ಎಸ್ ನಮ್ಮೂರಿನ ಜನತೆಗೆ ವರವಾಗುವ ಬದಲಿಗೆ ಶಾಪವಾಗಿದೆ. ಈಗ ಈ ಬೃಹತ್ ಗ್ರಾತದ ಸೇತುವೆಯು ವರ್ಷ ಮುಗಿಯುವುದರಲ್ಲಿ ಮತ್ತೇ ಕುಸಿಯಲು ಆರಂಭಿಸಿರುವುದು ಅವರಿಗೆ ನಡುಕ ಹುಟ್ಟಿಸಿದೆ.
ಈ ಬಗ್ಗೆ ಬಿ ಆರ್ ಟಿ ಎಸ್ ನವರಿಗೆ ದೂರಿ ಯಾವುದೇ ಪ್ರಯೋಜನವಿಲ್ಲ. ನಮ್ಮ ಜಿಲ್ಲೆಯ ಜನಪ್ರತಿನಿಧಿಗಳು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು.
ಅಲ್ಲದೆ, ತಪ್ಪಿತಸ್ಥರ ವಿರುದ್ದ ಯಾವುದೇ ಮುಲಾಜಿಲ್ಲದೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಬೀದಿಗಿಳಿಯುವುದು ಅನಿವಾರ್ಯವಾಗಲಿದೆ ಎಂದು ಸ್ಥಳೀಯ ನವಲೂರು ಮುಖಂಡ ಪುಂಡಲಿಕ ಎಚ್ಚರಿಸಿದ್ದಾರೆ.
ಧಾರವಾಡದ ಟೋಲ್ ನಾಕಾದಲ್ಲಿಯ ನೀರು ಹರಿಯವುದನ್ನು ತಡೆಗಟ್ಟಲು ಹೆಣಗಾಡುತ್ತಿರುವ ಬಿ ಆರ್ ಟಿ ಎಸ್ ಇದೀಗ ನವಲೂರು ಸೇತುವೆ ಕುಸಿತಕ್ಕೆ ಮತ್ತೇ ತೇಪೆ ಹಾಕುವ ಕೆಲಸಕ್ಕೆ ಮುಂದಾಗಲಿದೆ ಎಂದು ಹುಬ್ಬಳ್ಳಿ-ಧಾರವಾಡ ಜನತೆ ಗೊಣಗುವಂತಾಗಿದೆ.