ಧಾರವಾಡ prajakiran.com : ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಬಸವರಾಜ ಹೊರಟ್ಟಿ ಹೆಸರು ಫೈನಲ್ ಆಗಲಿದೆ ಎಂದು ಧಾರವಾಡ ಶಾಸಕ ಅರವಿಂದ ಬೆಲ್ಲದ ಹೇಳಿದರು.
ಅವರು ಉಳವಿ ಚೆನ್ನಬಸವೆಶ್ವರ ವೃತ್ತದಲ್ಲಿನ ಬಿಜೆಪಿ ಚುನಾವಣಾ ಪ್ರಚಾರ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದರು.
ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಹೊರಟ್ಟಿ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ. ಈ ಕುರಿತು ಪಕ್ಷವು ಅಧಿಕೃತವಾಗಿ ಘೋಷಿಸಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು.
ಬಿಜೆಪಿ ಟಿಕೆಟ್ಗೆ ಮೋಹನ ಲಿಂಬಿಕಾಯಿ ಮೊದಲಿನಿಂದಲೂ ಪ್ರಯತ್ನಿಸುತ್ತಿದ್ದಾರೆ. ಆದರೆ ಹೊರಟ್ಟಿ ಪಕ್ಷದ ಅಭ್ಯರ್ಥಿ ಆಗುವುದು ನಿಶ್ಚಿತ ಎಂದರು.
ಟಿಕೆಟ್ ಫೈನಲ್ ಆಗುವುದಕ್ಕಿಂತ ಮುಂಚೆ ಬಿಜೆಪಿ ಕಚೇರಿ ಉದ್ಘಾಟಿಸಿದ ಬಗ್ಗೆ ಪ್ರತಿಕ್ರಿಯಿಸಿದ ಬೆಲ್ಲದ , ಚುನಾವಣೆ ಕೆಲಸ ಬಹಳ ಇರುತ್ತದೆ.
ಹೀಗಾಗಿ ಕಚೇರಿ ಆರಂಭಿಸಲಾಗಿದೆ. ಹೊರಟ್ಟಿ ಅವರು ನಿನ್ನೆ ಪಕ್ಷದ ವರಿಷ್ಠರನ್ನು ಭೇಟಿಯಾಗಿದ್ದಾರೆ. ಟಿಕೆಟ್ ಸಿಗುವ ಭರವಸೆ ಅವರಿಗಿದೆ. ಆ ಹಿನ್ನೆಲೆಯಲ್ಲಿ ತಯಾರಿ ನಡೆಸಿದ್ದಾರೆ ಎಂದರು.
ಮೋಹನ ಲಿಂಬಿಕಾಯಿ ಪಕ್ಷೇತರರಾಗಿ ಕಣಕ್ಕಿಳಿಯುವ ವಿಚಾರ ತಮಗೆ ಗೊತ್ತಿಲ್ಲ. ಈ ಬಗ್ಗೆ ಅವರಿಗೆ ಕೇಳಬೇಕು ಎಂದು ಉತ್ತರಿಸಿದರು.
ಮಾಜಿ ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಶಾಸಕಿ ಸೀಮಾ ಮಸೂತಿ, ಜಿ.ಆರ್.ಭಟ್. ಶ್ಯಾಮ ಮಲ್ಲನಗೌಡರ, ಮೋಹನ ರಾಮದುರ್ಗ, ಸಿದ್ದು ಕಲ್ಯಾಣಶೆಟ್ಟಿ, ನಾಗರಾಜ ನಾಯಕ ಇನ್ನಿತರರು ಉಪಸ್ಥಿತರಿದ್ದರು.