ಧಾರವಾಡ Prajakiran.com:
ಕಳೆದ ಅಕ್ಟೋಬರ್ 28 ರಂದು ಮತದಾನ ನಡೆದಿದ್ದ ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರ ಕ್ಷೇತ್ರದ ಮತ ಎಣಿಕೆ ಕಾರ್ಯ ಮಂಗಳವಾರ ಬೆಳಿಗ್ಗೆ ನಗರದ ಕೃಷಿ ವಿಶ್ವವಿದ್ಯಾಲಯದ ಮತ ಎಣಿಕೆ ಕೇಂದ್ರದಲ್ಲಿ ಪ್ರಾರಂಭವಾಗಿದೆ.
ಚುನಾವಣಾ ಆಯೋಗದ ನಿರ್ದೇಶನದಂತೆ ಬೆಳಿಗ್ಗೆ 7.55 ಕ್ಕೆ ಮತಪೆಟ್ಟಿಗೆಗಳನ್ನು ಇರಿಸಿದ್ದ ಭದ್ರತಾ ಕೊಠಡಿಗಳನ್ನು ಅಭ್ಯರ್ಥಿಗಳು, ಅಧಿಕೃತ ಏಜೆಂಟರುಗಳ ಸಮ್ಮುಖದಲ್ಲಿ ತೆರೆಯಲಾಯಿತು. ಒಟ್ಟು 11 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ಒಂದು ಅಂಚೆ ಮತ ಸೇರಿ 52068 ಮತಗಳು ಚಲಾವಣೆಯಾಗಿವೆ. ಎರಡು ಕೊಠಡಿಗಳ 14 ಟೇಬಲ್ಲುಗಳಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತಿದೆ.
ಚುನಾವಣಾ ವೀಕ್ಷಕರಾಗಿರುವ , ಯೋಜನೆ, ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಚುನಾವಣಾಧಿಕಾರಿಯಾಗಿರುವ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್, ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಕಾಂತ ಮತ್ತಿತರರು ಉಪಸ್ಥಿತರಿದ್ದರು.
ಕೋವಿಡ್ ನಿಯಂತ್ರಣ ಮುಂಜಾಗ್ರತಾ ಕ್ರಮಗಳು
ಮತ ಎಣಿಕೆ ಕೇಂದ್ರದಲ್ಲಿ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮತ ಎಣಿಕೆ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟ ಅಧಿಕಾರಿಗಳು, ಸಿಬ್ಬಂದಿ ಪ್ರವೇಶಕ್ಕೆ ಒಂದು ದ್ವಾರ, ಅಭ್ಯರ್ಥಿಗಳು, ಅಧಿಕೃತ ಏ ಜನ ಏಜೆಂಟರು, ಮಾಧ್ಯಮ ಪ್ರತಿನಿಧಿಗಳ ಪ್ರವೇಶಕ್ಕೆ ಮತ್ತೊಂದು ಬದಿಯ ದ್ವಾರವನ್ನು ನಿಗದಿಪಡಿಸಲಾಗಿದೆ.
ಎರಡೂ ಕಡೆ ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಪ್ರತಿಯೊಬ್ಬರ ಆರೋಗ್ಯ ತಪಾಸಣೆ ಮಾಡಿ ಪ್ರವೇಶ ನೀಡುತ್ತಿದ್ದಾರೆ. ಪ್ರತ್ಯೇಕ ಆರೋಗ್ಯ ಕೊಠಡಿಗಳನ್ನೂ ಕೂಡ ಸ್ಥಾಪಿಸಲಾಗಿದೆ. ವೈರಾಣು ಮುಕ್ತಗೊಳಿಸಲು ಮತ ಎಣಿಕೆ ಕೊಠಡಿಗಳಲ್ಲಿ ಯುವಿ ಕಿರಣಗಳನ್ನು ಅಳವಡಿಸಲಾಗಿದೆ.