ಧಾರವಾಡ : ಜಿಪಂ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣ ಮುಚ್ಚಿ ಹಾಕಿದ್ದ ಬೆನ್ನಹಿಂದೆಯೇ ಆ ಪ್ರಕರಣವನ್ನು ಕೈಗೆತ್ತಿಕೊಂಡು ಆರಂಭದಲ್ಲಿ ಅವರ ಪತ್ನಿ ಮಲ್ಲಮ್ಮ ಜೊತೆಗೆ ಆ ಬಳಿಕ ಸಹೋದರ ಗುರುನಾಥಗೌಡ ಜೊತೆಗೆ ಕಾನೂನು ಹೋರಾಟಕ್ಕೆ ನೆರವು ನೀಡಿದ್ದ ಸಾಮಾಜಿಕ ಕಾರ್ಯಕರ್ತ ಬಸವರಾಜ ಕೊರವರ ಹಾಗೂ ಅಣ್ಣ ಗುರುನಾಥಗೌಡ ಹತ್ಯೆಗೂ ಸ್ಕೇಚ್ ರೂಪಿಸಿರುವುದು ಸಿಬಿಐ ತನಿಖೆ ವೇಳೆ ಬಯಲಿಗೆ ಬಂದಿದೆ.
ಸಿಬಿಐ ತನಿಖೆ ಅಧಿಕಾರಿಗಳ ತಂಡ ಈ ರಹಸ್ಯ ಭೇದಿಸಿದ್ದು, ಯೋಗೀಶಗೌಡ ಹತ್ಯೆಯ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದವರ ಧ್ವನಿ ಅಡಗಿಸಲು ಮುಂದಾಗಿದ್ದರು ಎಂದು ಗೊತ್ತಾಗಿದೆ.
ಸಿಬಿಐ ತನಿಖೆಗೆ ಆಗ್ರಹಿಸಿ ಕಾನೂನು ಹೋರಾಟಕ್ಕೆ ಮುಂದಾಗಿದ್ದ ಗುರುನಾಥಗೌಡರನ್ನು ಮೊದಲಿಗೆ ಪೊಲೀಸ್ ದುರ್ಬಳಕೆ ಮಾಡಿಕೊಂಡು ಎನ್ಕೌಂಟರ್ಗೂ ಹುನ್ನಾರ ನಡೆಸಲಾಗಿತ್ತು.
ಆರಂಭದಲ್ಲಿ ಇದಕ್ಕೆ ಪುಷ್ಟಿ ನೀಡುವಂತೆ ಗುರುನಾಥ ಗೌಡರ ಗೋವನಕೊಪ್ಪದ ತೋಟದ ಮನೆ ಮೇಲೆ ಪೊಲೀಸ್ ದಾಳಿ ನಡೆಸಿ, ಅಕ್ರಮವಾಗಿ ಶಸ್ತಾಸ್ತ್ರ ಪತ್ತೆಯಾಗಿದೆ ಎಂಬಂತೆ ಬಿಂಬಿಸಲಾಗಿತ್ತು.
ಈ ಮಾಹಿತಿ ಅರಿತು ಗುರುನಾಥಗೌಡ ಸ್ಥಳದಿಂದ ತೆರಳಿದ್ದರು. ಆ ಬಳಿಕ ನೇರವಾಗಿ ನ್ಯಾಯಾಲಯಕ್ಕೆ ಶರಣಾಗಿ ಗುರುನಾಥಗೌಡ ತಮ್ಮ ಪ್ರಾಣ ಉಳಿಸಿಕೊಂಡಿದ್ದರು.
ಇದರಿಂದಾಗಿ ಎನ್ಕೌಂಟರ್ ಪ್ಲ್ಯಾನ್ನಿಂದ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದ ಗುರುನಾಥಗೌಡ ಕಾನೂನು ಹೋರಾಟಕ್ಕೆ ಬಸವರಾಜ ಕೊರವರ ಧ್ವನಿಯಾದರು. ಯೋಗೀಶಗೌಡ ಪರ ಹೋರಾಟ ಹತ್ತಿಕ್ಕಲು ಯತ್ನಿಸಿದ ಪೊಲೀಸರ ಕಳ್ಳಾಟವನ್ನು ಸಿಸಿಟಿವಿಯಲ್ಲಿ ಸೆರೆಹಿಡಿದು ಮಾಧ್ಯಮಗಳ ಮೂಲಕ ಅದಕ್ಕೆ ಜೀವ ತುಂಬಿದವರು ಇದೇ ಬಸವರಾಜ ಕೊರವರ.
ಅವರ ಹೋರಾಟ ತೀವ್ರಗೊಂಡ ಬೆನ್ನಲ್ಲೇ ಅವರ ಮೇಲೆ ಮಾನನಷ್ಟು ಮೊಕದ್ದಮೆ ಪ್ರಕರಣ ದಾಖಲಿಸಿ ಹೆದರಿಸುವ ಪ್ರಯತ್ನ ನಡೆಯಿತು. ಅದಕ್ಕೂ ಬಗ್ಗದಿದ್ದಾಗ ಅವರ ಹತ್ಯೆಗೆ ಸಂಚು ರೂಪಿಸಲಾಗಿತ್ತು.
ಹೀಗಾಗಿ ಸಿಬಿಐ ಅಧಿಕಾರಿಗಳು ಸಾಮಾಜಿಕ ಕಾರ್ಯಕರ್ತ ಬಸವರಾಜ ಕೊರವರ, ಸಹೋದರ ಗುರುನಾಥಗೌಡ ಸೇರಿದಂತೆ ಹಲವರಿಗೆ ಸುರಕ್ಷತೆಯಿಂದ ಇರಲು ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಪ್ರಜಾಕಿರಣ.ಕಾಮ್ ದೊಂದಿಗೆ ಮಾತನಾಡಿದ ಬಸವರಾಜ ಕೊರವರ, ಈ ಮಾಹಿತಿ ಮಾಧ್ಯಮಗಳಿಂದ ತಿಳಿದು ನನಗೂ ಆಘಾತವಾಗಿದೆ. ತಂದೆ ತಾಯಿ ಆರ್ಶೀವಾದ ಹಾಗೂ ಧಾರವಾಡ ಜನತೆಯ ಬೆಂಬಲದಿಂದಾಗಿ
ನನಗೆ ಏನೂ ಆಗಿಲ್ಲ. ಆದರೆ ಇಂದು ನಾವು ನಡೆಸಿದ ಕಾನೂನು ಹೋರಾಟದ ಫಲವಾಗಿ ಹಲವು ಪ್ರಭಾವಿಗಳ ಮುಖವಾಡ ಕಳಚಿದೆ ಎಂದು ಬಸವರಾಜ ಕೊರವರ ವಿವರಿಸಿದರು.