ಬೆಂಗಳೂರು prajakiran.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 84ರ ಹಗದೂರು ವ್ಯಾಪ್ತಿಯ ವರ್ತೂರು ಕೊಡಿ ವೃತ್ತಕ್ಕೆ ರಾಜ್ಯ ಕಂಡ ದಕ್ಷ ಪೊಲೀಸ್ ಅಧಿಕಾರಿ ದಿವಂಗತ ಮಧುಕರ್ ಶೆಟ್ಟಿ ವೃತ್ತ ಎಂದು ನಾಮಕರಣ ಮಾಡುವುದಕ್ಕೆ ಕೌನ್ಸಿಲ್ ಸಭೆಯು ಈಗಾಗಲೇ ನಿರ್ಣಯ ತೆಗೆದುಕೊಂಡಿದೆ.
ಆದರೆ, ಅದಕ್ಕೆ ಅನುಮೋದನೆ ನೀಡಬೇಕಾದ ರಾಜ್ಯದ ನಗರಾಭಿವೃದ್ದಿ ಇಲಾಖೆ ಅಪರ್ ಮುಖ್ಯಕಾರ್ಯದರ್ಶಿ
ಅದನ್ನು ತಿರಸ್ಕರಿಸಿರುವುದಕ್ಕೆ ಜನಜಾಗೃತಿ ಸಂಘದ ಅಧ್ಯಕ್ಷ ಹಾಗೂ ಪೊಲೀಸ್ ಹಕ್ಕುಗಳ ಹೋರಾಟಗಾರ ಬಸವರಾಜ ಹೆಚ್. ಕೊರವರ ತೀವ್ರಬೇಸರ ವ್ಯಕ್ತಪಡಿಸಿದ್ದಾರೆ.
ಬಹುಶಃ ಇದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ಬಂದಂತೆ ಕಾಣುವುದಿಲ್ಲ. ಬಂದಿದ್ದರೆ ಅವರೇ ವಿಶೇಷ ಮುತುರ್ವಜಿವಹಿಸಿ ಅದನ್ನು ಅನುಮೋದನೆ ನೀಡುವಂತೆ ಸೂಚಿಸುತ್ತಿದ್ದರು.
ಹೀಗಾಗಿ ರಾಜ್ಯ ಸರಕಾರ ಕೂಡಲೇ ಇದನ್ನು ಗಂಭೀರವಾಗಿ ತೆಗೆದುಕೊಂಡು ಅದಕ್ಕೆ ಅನುಮೋದನೆ ನೀಡುವ ಮೂಲಕ ಬಿಬಿಎಂಪಿ ತೆಗೆದುಕೊಂಡ ನಿರ್ಣಯವನ್ನು ಎತ್ತಿಹಿಡಿಯಬೇಕು.
ಇಲ್ಲದಿದ್ದರೆ, ರಾಜ್ಯ ಸರಕಾರ ಒಬ್ಬ ಪ್ರಾಮಾಣಿಕ ಅಧಿಕಾರಿಯ ಸೇವೆಯನ್ನು
ಕಡೆಗಣಿಸಿ, ಅವಮಾನಿಸಿದಂತಾಗುತ್ತದೆ ಎಂದು ಕೊರವರ ಹೇಳಿದ್ದಾರೆ.
ಬಿಬಿಎಂಪಿ ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಅನೇಕ ಗಣ್ಯ ವ್ಯಕ್ತಿಗಳು, ದಕ್ಷ ಅಧಿಕಾರಿಗಳು, ಹಿರಿಯ ರಾಜಕಾರಣಿಗಳ ಹಾಗೂ
ವಿಶೇಷವಾಗಿ ಸಮಾಜ ಸೇವಕರ ಹೆಸರು ನಾಮಕರಣ ಮಾಡಿದಂತೆ ಕರುನಾಡು ಕಂಡ ದಕ್ಷ ಪೊಲೀಸ್ ಅಧಿಕಾರಿಯಾಗಿದ್ದ ಮಧುಕರ ಶೆಟ್ಟಿಯವರ ಹೆಸರು ನಾಮಕರಣ ಮಾಡುವ ಮೂಲಕ ಅವರ ಹೆಸರನ್ನು ಚಿರಸ್ಥಾಯಿಯಾಗಿಸಬೇಕು.
ರಾಜ್ಯದ ಜನತೆ ಎಂದಿಗೂ ಮರೆಯುವುದಿಲ್ಲ. ಅಂತಹ ಪ್ರಾಮಾಣಿಕ ಪೊಲೀಸ್ ಅಧಿಕಾರಿಯಾಗಿದ್ದ ಮಧುಕರ್ ಶೆಟ್ಟಿಯವರ ಹೆಸರನ್ನು ಅಜಾರಾಮರವಾಗಿಸಲು ರಾಜ್ಯ ಸರಕಾರ ಕೂಡಲೇ ತನ್ನ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು ಎಂದು ಪೊಲೀಸ್ ಹಕ್ಕುಗಳ ಹೋರಾಟಗಾರ ಬಸವರಾಜ ಹೆಚ್. ಕೊರವರ ಒತ್ತಾಯಿಸಿದ್ದಾರೆ.