ಧಾರವಾಡ prajakiran.com : ಹುಬ್ಬಳ್ಳಿಯ ಅಮರಗೊಳದಲ್ಲಿ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಅವರು ತರಾತುರಿಯಲ್ಲಿ ಆಯೋಜಿಸಿದ್ದ “ವಾಜಪೇಯಿ ನಗರ ” ನಾಮಕರಣ ಸಮಾರಂಭ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ.
ಮೂಲತಃ 1992 ರಲ್ಲಿ ಕೆ ಐ ಎ ಡಿ ಬಿ ಗೆ ಸೇರಿದ 29 ಎಕರೆ ಜಮೀನಿನಲ್ಲಿ ಅಂದಿನ ಸರಕಾರದಲ್ಲಿ ಸಚಿವರಾಗಿದ್ದ ಎಸ್ ಆರ್ ಮೊರೆ ಯವರು ಆಶ್ರಯ ಯೋಜನೆಯಲ್ಲಿ ಸುಮಾರು 825 ಬಡ ಕುಟುಂಬಗಳಿಗೆ ನಿವೇಶನ ಹಂಚಿ ಮನೆಗಳ ನಿರ್ಮಾಣ ಮಾಡಿ ಅದಕ್ಕೆ ಶ್ರೀ ಮಹಾತ್ಮ ಗಾಂಧಿ ನಗರ ಎಂದು ಹೆಸರಿಟ್ಟಿದ್ದರು.
ಅಂದಿನಿಂದ ಇಂದಿನವರೆಗೆ ಅದೇ ಹೆಸರಿನಿಂದ ಈ ಬಡಾವಣೆಯನ್ನು ಜನರು ಗುರುತಿಸಿದ್ದಾರೆ.
ಆದರೆ, ಶಾಸಕರು ಅದನ್ನು ಇಂದು “ಅಟಲ್ ಬಿಹಾರಿ ನಗರ “ಎಂದು ಮರುನಾಮಕರಣ ಮಾಡುವ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಆರೋಪಿಸಿದ್ದಾರೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರಾಗಿರುವ ಪ್ರಲ್ಹಾದ ಜೋಶಿಯವರ ಮೂಲಕ ಕೊಳಚೆ ಮಂಡಳಿಯ ಯೋಜನೆಯಲ್ಲಿ ಮನೆಗಳ ನಿರ್ಮಾಣ ಕಾಮಗಾರಿ ಅಡಿಗಲ್ಲು ಸಮಾರಂಭವನ್ನು ಏರ್ಪಡಿಸಿದ್ದ ಶಾಸಕ ಅರವಿಂದ ಬೆಲ್ಲದ ಅವರು ತುರ್ತಾನು ತುರ್ತು ನಿರ್ಣಯಿಸಿ ವಾಜಪೇಯಿ ಅವರ ಜನ್ಮ ದಿನದಂದು ಯಾವುದೇ ಪೂರ್ವ ಯೋಜನೆಯ ಅನುಮೋದನೆ ಇಲ್ಲದೆ ಕಾನೂನು ಬಾಹಿರ ಸಮಾರಂಭ ನಡೆಸಿರುವುದು ಎಷ್ಟರಮಟ್ಟಿಗೆ ಸರಿ? ಎಂದು ಪ್ರಶ್ನಿಸಿದ್ದಾರೆ.
ಇದಲ್ಲದೆ ಜಗತ್ತೇ ಒಪ್ಪಿಕೊಂಡ ಮಹಾತ್ಮ ಗಾಂಧೀಜಿ ಯವರ ಹೆಸರನ್ನು ಬದಲಾಯಿಸಿ ಮತ್ತೊಬ್ಬ ಪುಣ್ಯಾತ್ಮನ ಹೆಸರನ್ನು ಅನಧಿಕೃತವಾಗಿ ಪರಿವರ್ತಿಸುವದು ಬಿಜೆಪಿ ಶಾಸಕರು ಕೊಡುವ ಸೂಕ್ತ ಗೌರವನಾ ಎಂದು ಕಿಡಿಕಾರಿದ್ದಾರೆ.
ಶಾಸಕರಿಗೆ ಬಡವರ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ ಮತ್ತೊಂದು 50 ಎಕರೆ ಪ್ರದೇಶದಲ್ಲಿ ಆಟಲಜಿ ಯವರ ಹೆಸರಿನಲ್ಲಿ ಯೋಜನೆಯನ್ನು ಕೈಗೆತ್ತಿಕೊಂಡಿದ್ದರೆ ನಾವೇ ಸಾರ್ವರ್ಥಿಕವಾಗಿ ಇವರುಗಳಿಗೆ ಸನ್ಮಾನ ಮಾಡುತ್ತಿದ್ದೇವು ಎಂದು ಅಲ್ಲದೆ ಜನರು ಮೆಚ್ಚುತ್ತಿದ್ದರು ಎಂದು ಹೇಳಿದ್ದಾರೆ.
ಇದನ್ನು ಬಿಟ್ಟು ಕಾನೂನು ಬಾಹಿರ, ಯಾವುದೇ ನಿಯಮಾನುಸಾರ ಪ್ರಕ್ರಿಯೆ ಮಾಡದೆ ತರಾತುರಿಯಲ್ಲಿ ಈ ದೇಶದ ಇಬ್ಬರು ಪುಣ್ಯಪುರುಷರ ಹೆಸರಿಗೆ ಚ್ಯುತಿ ತರುವ ಕೆಲಸ ಮಾಡಿದ್ದು ಸರಿನಾ? ಎಂದು ಪಿ.ಎಚ್. ನೀರಲಕೇರಿ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಿಗೆ ವಿಚಾರಿಸಿದೆ ಅವರ ಪ್ರಕಾರ ಇದು ಯಾವುದೇ ಪ್ರಕ್ರಿಯೆ ನಮ್ಮಲ್ಲಿಲ್ಲ ಅಂತ ಹೇಳಿದ್ದು ನೋಡಿದರೆ ಆಡಳಿತ ವ್ಯವಸ್ಥೆ ಎತ್ತ ಸಾಗುತ್ತಿದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ ಎಂದು ದೂರಿದರು.
ರಾಷ್ಟ್ರಪಿತ ಮಹಾತ್ಮಗಾಂಧಿಯವರ ಹೆಸರು ತೆಗೆದು, ಅದಕ್ಕೆ ಇನ್ನೊಬ್ಬ ರಾಷ್ಟ್ರ ನಾಯಕ ಅಟಲ್ ಬಿಹಾರಿ ವಾಜಪೇಯಿಯವರ ಹೆಸರು ಇಡುವಅಗತ್ಯವೇನಿದೆ. ಇದು ಇಬ್ಬರನ್ನು
ಅವಮಾನಿಸಿದಂತೆ ಎಂದು ಪಶ್ಚಾತಾಪ ಪಡಬೇಕು, ಕಾನೂನು ಬಾಹಿರ ಕಾರ್ಯಕ್ರಮದಲ್ಲಿ ಶಾಸನ ಬದ್ಧ
ನಾಯಕರುಗಳು ಈ ತಪ್ಪು ಮಾಡಿದ್ದರಿಂದ ಸಾರ್ವಜನಿಕರಲ್ಲಿ ಬಹಿರಂಗವಾಗಿ ಕ್ಷಮೆ ಕೇಳಬೇಕು, ಇಲ್ಲವಾದರೆ ಸಂಬಂಧಪಟ್ಟ ಪ್ರಾಧಿಕಾರ ಇವರುಗಳ ಮೇಲೆ ಅನಿವಾರ್ಯವಾಗಿ ಕಾನೂನು ಕ್ರಮ ಕೈಕೊಳ್ಳಬೇಕೆಂದು ಎಂದು ಕಾಂಗ್ರೆಸ್ ಪಕ್ಷದ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಆಗ್ರಹಿಸಿದ್ದಾರೆ.
ನಮ್ಮ ಪ್ರತಿಭಟನೆಯ ನಂತರವೂ ಈ ಕಾರ್ಯಕ್ರಮ ನಡೆದದ್ದು ಅತ್ಯಂತ ಖೇದಕರ ಸಂಗತಿ ಅದು ಪುಣ್ಯ ಪುರುಷ ಹಾಗೂ ಪ್ರಜಾಪ್ರಭುತ್ವ ಪ್ರತಿಪಾದಕ ಅಟಲ್ ಬಿಹಾರಿ ವಾಜಪೇಯಿ ಯವರ ಜನ್ಮದಿನದಂದು ನಡೆದಿರುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.