ಧಾರವಾಡ ಪ್ರಜಾಕಿರಣ.ಕಾಮ್ : ಜಿಲ್ಲೆಯಲ್ಲಿ ಒಟ್ಟು 2,33,464 ಜಾನುವಾರುಗಳಿವೆ. ಈ ಪೈಕಿ ಈವರೆಗೆ 4334 ದನಕರುಗಳು ಚರ್ಮಗಂಟು ರೋಗಕ್ಕೆ ತುತ್ತಾಗಿವೆ.
2879 ಗುಣಮುಖವಾದರೆ, 288 ಜಾನುವಾರು ಸಾವನ್ನಪ್ಪಿವೆ. ಇದರಿಂದಾಗಿ ರೈತ ಸಮೂಹ ಆತಂಕಗೊಂಡಿದೆ ಎಂದು ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ತಿಳಿಸಿದರು.
ಅವರು ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,
ಧಾರವಾಡ ತಾಲೂಕಿನಲ್ಲಿ
ಈವರೆಗೆ 36 ಗ್ರಾಮದ 422
ಜಾನುವಾರುಗಳಿಗೆ ಚರ್ಮಗಂಟು ರೋಗ ತಗುಲಿದೆ.
62 ಗುಣಮುಖವಾಗಿದ್ದರೆ, ಕೆಲವಡೆ ವೈದ್ಯರ ಕೊರತೆ, ಸಕಾಲಕ್ಕೆ ಸೂಕ್ತ ಚಿಕಿತ್ಸೆ ದೊರಕದೆ 42
ಜಾನುವಾರುಗಳು ಸಾವನ್ನಪ್ಪಿವೆ ಎಂದರು.
ಜಿಲ್ಲೆಯಲ್ಲಿ ಅತಿಹೆಚ್ಚು ಹುಬ್ಬಳ್ಳಿ, ನವಲಗುಂದ ಹಾಗೂ ಕುಂದಗೋಳ ತಾಲೂಕಿನಲ್ಲಿ ಜಾನುವಾರು ಸಾವನ್ನಪ್ಪಿವೆ.
ಇದು ಕರೋನಾ ಮಾದರಿಯಲ್ಲಿ ವೇಗವಾಗಿ ಹರಡುತ್ತಿದೆ.
ಈ ಮೊದಲು ಅಷ್ಟು ಗಂಭೀರವಾಗಿರಲಿಲ್ಲ. ಇದಕ್ಕೆ ಲಸಿಕೆ ಕೂಡ ಕೊರತೆಯಿದೆ. ಖಾಸಗಿಯವರ ಬಳಿ ಖರೀದಿಸಿ ಹಾಕಲಾಗುತ್ತಿದೆ ಎಂದರು.
ಧಾರವಾಡ ಜಿಲ್ಲೆಗೆ ಒಟ್ಟು 600 ಜನ ವೈದ್ಯರ ಹಾಗೂ ಸಿಬ್ಬಂದಿ ಅವಶ್ಯಕತೆ ಇದೆ. ಈ ಪೈಕಿ ಶೇ 50ರಷ್ಟು ಹುದ್ದೆಗಳು ಖಾಲಿಯಿವೆ. ಜಿಲ್ಲೆಯಲ್ಲಿ 108ಕ್ಕೂ ಹೆಚ್ಚು ಪಶು ಆಸ್ಪತ್ರೆ ಗಳಿವೆ.
78 ವೈದ್ಯರ ಅನುಮೋದನೆಗೊಂಡ ಹುದ್ದೆಗಳಿವೆ. ಆದರೆ ಕೇವಲ 48 ವೈದ್ಯರು ಮಾತ್ರ ಇದ್ದಾರೆ. ಅದರಲ್ಲಿ ಉಪನಿರ್ದೇಶಕರು, ಸಹಾಯಕ ನಿರ್ದೇಶಕರು ಇದ್ದಾರೆ.
ಜೊತೆಗೆ ಸಿಬ್ಬಂದಿ ವರ್ಗ ಇಲ್ಲ. ಹೀಗಾಗಿ ಅನೇಕ ರೈತರು ಆಸ್ಪತ್ರೆಗೆ ಅಲೆದಾಡಿ ಬೇಸತ್ತಿದ್ದಾರೆ. ಎರಡು ಮೂರು ಊರುಗಳಲ್ಲಿ ಒಬ್ಬರೇ ವೈದ್ಯರು ಇದ್ದರೆ ಪರಿಸ್ಥಿತಿಯನ್ನು ಯಾವ ರೀತಿ ನಿಭಾಯಿಸಲು ಸಾಧ್ಯ ಎಂದು ಪ್ರಶ್ನಿಸಿದರು.
ಅಲ್ಲದೆ, ಜಾನುವಾರು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಬರುವುದು ಕೂಡ ಸವಾಲಿನ ಕೆಲಸವಾಗಿದೆ.
ತವರು ಜಿಲ್ಲೆಯವರೇ ಮುಖ್ಯಮಂತ್ರಿಯಾಗಿರುವುದರಿಂದ ವಿಶೇಷ ಕಾಳಜಿವಹಿಸಿ, ಸಿಬ್ಬಂದಿ ಕೊರತೆ ನೀಗಿಸಬೇಕು.
ಜೊತೆಗೆ ಈಗ ಸಾವನ್ನಪ್ಪಿದ ಜಾನುವಾರು ಪರಿಹಾರ ಮೊತ್ತ ರೈತರಿಗೆ ಯಾವುದೇ ರೀತಿಯ ಪ್ರಯೋಜನ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಂದು ಎತ್ತಿನ ಬೆಲೆ ಕನಿಷ್ಟ ಎನಿಲ್ಲವೆಂದರೂ 1ಲಕ್ಷಕ್ಕೂ ಅಧಿಕ ಇದೆ. ಆದರೆ ಸರ್ಕಾರ ಎತ್ತು/ಹೋರಿಗೆ ಕೇವಲ 30 ಸಾವಿರ ನೀಡುತ್ತಿದೆ. ಆಕಳಿಗೆ 20 ಸಾವಿರ, ಕರುವಿಗೆ ಕೇವಲ 5 ಸಾವಿರ ಪರಿಹಾರ ಧನ ವಿತರಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪಶು ಸಂಗೋಪನೆ ಸಚಿವರಾದ ಪ್ರಭು ಚವ್ಹಾಣ ಅವರು ಕಳೆದ ಎರಡು ವರ್ಷಗಳಿಂದ 400 ಜನ ಹೊಸ ವೈದ್ಯರನ್ನ ನಿಯೋಜಿಸಲಾಗುವುದು ಎಂದು ಹೇಳಿಕೆ ಕೊಡ್ತಾ ಬರ್ತಾ ಇದ್ದಾರೆ.
ಇಲ್ಲಿಯವರೆಗೂ ಸಚಿವರ ಹೇಳಿಕೆಗಳಿಂದ ಯಾವುದೇ ಪ್ರಯೋಜನ ಆಗಿಲ್ಲ.
108 ಮಾದರಿಯಲ್ಲಿ ರೈತರಿಗೆ ಅನುಕೂಲವಾಗಲೆಂದು ಕಾಲ್ ಸೆಂಟರ್ ರಚಿಸಿದ್ದು, 1962 ಕ್ಕೆ ಕರೆ ಮಾಡಿದರೆ ರೈತರು ಇರುವ ಕಡೆಗೆ ಬಂದು ಚಿಕಿತ್ಸೆ ನೀಡಲಾಗುವುದು ಅಂತ ಹೇಳಿ ನಾಲ್ಕು ತಿಂಗಳ ಹಿಂದುಗಡೆ ಸಂಜೀವಿನಿ ವಾಹನಗಳನ್ನ ಲೋಕಾರ್ಪಣೆ ಮಾಡಿದರು.
ಆದರೆ, ಆ ವಾಹನಗಳಿಗೆ ಇವತ್ತಿಗೂನು ಸಿಬ್ಬಂದಿನೇ ನಿಯೋಜನೆ ಮಾಡಿಲ್ಲ ವಾಹನಗಳು ತುಕ್ಕು ಹಿಡಿತ ಇದ್ದಾವೆ ಎಂದು ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಆರೋಪಿಸಿದರು.
ಜನಜಾಗೃತಿ ಸಂಘದ ಉಪಾಧ್ಯಕ್ಷ ನಾಗರಾಜ ಕಿರಣಗಿ ಮಾತನಾಡಿ, ಜಿಲ್ಲೆಯ ಒಟ್ಟು ಪರಿಹಾರ ಮೊತ್ತ 62ಲಕ್ಷ 40 ಸಾವಿರ ಇದೆ. ಈ ಪೈಕಿ 7.95 ಲಕ್ಷ ಮಾತ್ರ ಬಿಡುಗಡೆ ಆಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಸಂಚಾರಿ ಆಸ್ಪತ್ರೆ ಬಿಟ್ಟು
113 ಪಶು ಆಸ್ಪತ್ರೆ ಇದೆ. ಪಶು ಸಂಗೋಪನೆ ಇಲಾಖೆಯ ಕೆಲ ವೈದ್ಯರು, ಸಿಬ್ಬಂದಿ
ಬೇರೆ ಬೇರೆ ಕಡೆ ನಿಯೋಜನೆಯಲ್ಲಿದ್ದಾರೆ.
ಹೀಗಾಗಿ ಸರ್ಕಾರ ಅವರನ್ನು ಮಾತೃ ಇಲಾಖೆಗೆ ಮರಳಿ ಕರೆ ತರಬೇಕು ಎಂದು ಆಗ್ರಹಿಸಿದರು.
ಅಲ್ಲದೆ, ತಾತ್ಕಾಲಿಕವಾಗಿ ನಿವೃತ್ತರಾದರವನ್ನು ಸೇವೆಗೆ ನಿಯೋಜಿಸಬೇಕು.
ಪರಿಹಾರ ಮೊತ್ತವನ್ನು ಗಣನೀಯ ಪ್ರಮಾಣದಲ್ಲಿ ಏರಿಸಬೇಕು. ಆ ಮೂಲಕ ರೈತರಿಗೆ ಜಾನುವಾರುಗಳ ಹಾನಿಯನ್ನು ಧೈರ್ಯವಾಗಿ ಎದುರಿಸಲು ನೈತಿಕ ಸ್ಥೈರ್ಯ ತುಂಬಬೇಕು.
ಈ ಬಗ್ಗೆ ನಾವು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜನಜಾಗೃತಿ ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ, ಯುವ ಮುಖಂಡರಾದ ಸುರೇಶ ಕೋರಿ, ಬಸವರಾಜ ಕೊತದೊಡ್ಡಿ, ಶಿವಕುಮಾರ್ ದೇವರಮನಿ, ನವೀನ್ ಪ್ಯಾಟಿ ಉಪಸ್ಥಿತರಿದ್ದರು.