ಧಾರವಾಡ prajakiran. comಅ.11 : ಸ್ಥಳೀಯ ಎಂ.ಬಿ. ನಗರದ ನಿವಾಸಿಗಳಾದ ಪ್ರಮಥನಾಥ ಮತ್ತು ಶ್ರೀದೇವಿ ಪಾವಟೆ ಎಂಬ ದಂಪತಿಗಳು ತಾವು ಈ ಹಿಂದೆ ಅಕ್ಟೋಬರ್ 30, 2008 ರಂದು 10 ವರ್ಷದ ಅವಧಿಯ ಎಲ್.ಐ.ಸಿ. ಹೆಲ್ತ್ ಪ್ಲಸ್ ಪಾಲಸಿ (ವೈದ್ಯಕೀಯ ವಿಮೆ) ಖರೀದಿಸಿದ್ದರು.
ಶ್ರೀದೇವಿ ಅವರು ಅಕ್ಟೋಬರ್ 30, 2008 ರಂದು ಎಸ್.ಡಿ.ಎಮ್. ಆಸ್ಪತ್ರೆಯಲ್ಲಿ ದಾಖಲಾಗಿ ಕಿಬ್ಬೊಟ್ಟೆಯ ಸಮಸ್ಯೆಗಾಗಿ ರೂ.79,216/- ಭರಿಸಿ ಶಸ್ತ್ರ ಚಿಕಿತ್ಸೆ ಪಡೆದಿದ್ದು, ಆ ವೈದ್ಯಕೀಯ ವೆಚ್ಚವನ್ನು ತನಗೆ ಪಾವತಿಸುವಂತೆ ಎಲ್.ಐ.ಸಿ. ಆಫ್ ಇಂಡಿಯಾಗೆ ತಮ್ಮ ಪಾಲಿಸಿ ಆಧಾರದಲ್ಲಿ ಕ್ಲೇಮ್ ಅರ್ಜಿ ಸಲ್ಲಿಸಿದ್ದರು.
ಆದರೆ ಎಲ್.ಐ.ಸಿ. ಯು ತಮ್ಮ ಕ್ಲೇಮ್ ಅನ್ನು ಸೂಕ್ತ ಕಾರಣವಿಲ್ಲದೇ ತಿರಸ್ಕರಿಸಿ, ಸೇವಾ ನ್ಯೂನ್ಯತೆ ಎಸಗಿದೆ ಎಂದು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷ ಈಶಪ್ಪ. ಕ. ಭೂತೆ ಹಾಗೂ ಸದಸ್ಯರಾದ ಶ್ರೀಮತಿ ವಿ.ಎ. ಬೋಳಶೆಟ್ಟಿ ಮತ್ತು ಪಿ.ಸಿ.ಹಿರೇಮಠ ಅವರು ಎಲ್.ಐ.ಸಿಯು ಫಿರ್ಯಾದಿದಾರರು ಪಾಲಸಿ ಹೊಂದಿದ್ದರೂ, ಅವರಿಗೆ ಸರಿಯಾಗಿ ಸ್ಪಂದಿಸದೆ ಸೇವಾ ನ್ಯೂನ್ಯತೆ ಎಸಗಿದೆ ಅಂತಾ ಅಭಿಪ್ರಾಯಪಟ್ಟು ದೂರುದಾರರ ವೈದ್ಯಕೀಯ ವೆಚ್ಚ ರೂ.79216 ಗಳನ್ನು ಮತ್ತು ಕ್ಲೇಮ್ ತಿರಸ್ಕರಿಸಿದ ದಿನಾಂಕದಿಂದ ಹಣ ಸಂದಾಯ ಮಾಡುವವರೆಗೆ ಶೇ.8% ಬಡ್ಡಿ ಸಮೇತ ಕೊಡಬೇಕು ಹಾಗೂ ದೂರುದಾರರಿಗೆ ಆಗಿರುವ ಮಾನಸಿಕ ಹಿಂಸೆ, ಅನಾನುಕೂಲತೆಗಾಗಿ ರೂ.50 ಸಾವಿರಗಳ ಪರಿಹಾರದ ಜೊತೆಗೆ ಪ್ರಕರಣದ ಖರ್ಚು ಅಂತಾ ರೂ.10 ಸಾವಿರಗಳನ್ನು ಕೊಡಬೇಕು ಅಂತಾ ತೀರ್ಪು ನೀಡಿ ಆದೇಶಿಸಿದೆ.